ಹುಬ್ಬಳ್ಳಿ: ‘ಟಿಪ್ಪು ಕುರಿತು ಷೇಕ್ ಅಲಿ ಪ್ರಕಟಿಸಿರುವ ಪುಸ್ತಕಕ್ಕೆ ಮುನ್ನುಡಿ ಬರೆದಿರುವ ಬಗ್ಗೆ ನೆನಪಿಲ್ಲ. ಆ ಪುಸ್ತಕವನ್ನು ನಾನು ನೋಡಿಯೇ ಇಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ‘ಕಾರ್ಯಕ್ರಮವೊಂದರಲ್ಲಿ ನಾನು ಹಾಗೂ ಇತರೆ ಬಿಜೆಪಿ ಮುಖಂಡರು ಟಿಪ್ಪು ವೇಷ ಹಾಕಿರುವ ಬಗ್ಗೆ ಅರಿವಿಲ್ಲ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಟಿಪ್ಪು ಸುಲ್ತಾನ್ ಕುರಿತ ನೈಜ ಇತಿಹಾಸವನ್ನು ರಾಷ್ಟ್ರಪತಿ ಅವರಿಗೆ ಪತ್ರ ಬರೆದು ತಿಳಿಸಲಾಗುವುದು ಎಂದು ಸಂಸದ ಪ್ರಹ್ಲಾದ ಜೋಶಿ ಶುಕ್ರವಾರ ಇಲ್ಲಿ ಹೇಳಿದರು.
‘ವಿಧಾನಸೌಧ ವಜ್ರಮಹೋತ್ಸವ ಸಮಾರಂಭದಲ್ಲಿ ರಾಷ್ಟ್ರಪತಿ ಅವರಿಗೆ ಭಾಷಣ ಸಿದ್ಧಪಡಿಸಿಕೊಟ್ಟಿರುವುದು ರಾಜ್ಯ ಸರ್ಕಾರ’ಎಂದರು.
ಸಂಪುಟದಿಂದ ಕೈಬಿಡಿ: ‘ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಜೆ.ಜಾರ್ಜ್ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿರುವುದರಿಂದ ತಕ್ಷಣ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸಲಿದೆ’ ಎಂದು ಶೆಟ್ಟರ್ ಹೇಳಿದರು.
‘ಟಿಪ್ಪು ಮುಸ್ಲಿಂ ಎಂಬ ಕಾರಣಕ್ಕಾಗಿ ಆತನ ಜಯಂತಿ ವಿರೋಧಿಸುತ್ತಿಲ್ಲ. ಆತನ ಆಡಳಿತಾವಧಿಯಲ್ಲಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯಗಳ ಬಗ್ಗೆ ವಿರೋಧ ಇದೆ’ ಎಂದರು.
ವಿದ್ಯಾರ್ಥಿ ಮೇಲೆ ಹಲ್ಲೆ
ಶಿವಮೊಗ್ಗ: ಟಿಪ್ಪು ಜಯಂತಿ ಆಚರಿಸದಂತೆ ಮೂವರು ಬಾಲ ಕರು ಪಿಯು ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿರುವ ಘಟನೆ ಸೀಗೆಹಟ್ಟಿಯಲ್ಲಿ ಶುಕ್ರವಾರ ನಡೆ ದಿದೆ.
ಸೈಯದ್ ಜಬೀವುಲ್ಲಾ (18) ಹಲ್ಲೆಗೆ ಒಳಗಾದ ವಿದ್ಯಾರ್ಥಿ. ರಾತ್ರಿ ಬೈಕ್ನಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿದ ಮೂವರು ಚಾಕುವಿ ನಿಂದ ಇರಿದು ಪರಾರಿಯಾಗಿದ್ದಾರೆ.
ಟಿಪ್ಪುವಿನ ಸತ್ಯ ಬಿಚ್ಚಿಡುತ್ತೇನೆ: ಪ್ರತಾಪಸಿಂಹ
ಮೂಡಿಗೆರೆ: ‘ಮೈಸೂರಿನಲ್ಲಿ ನಡೆಯುವ ಟಿಪ್ಪು ಜಯಂತಿಗೆ ಆಹ್ವಾನ ನೀಡಿದರೆ ತೆರಳುತ್ತೇನೆ. ಅಲ್ಲಿ ಟಿಪ್ಪು ಕುರಿತು ಸತ್ಯವನ್ನೇ ಹೇಳುತ್ತೇನೆ’ ಎಂದು ಸಂಸದ ಪ್ರತಾಪಸಿಂಹ ಹೇಳಿದರು.
ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯ ಸರ್ಕಾರಕ್ಕೆ ಸಾಧಕರ ಬಗ್ಗೆ ನಿಜವಾದ ಕಾಳಜಿಯಿದ್ದರೆ ಶಿಶುನಾಳ ಷರೀಫರ, ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜನ್ಮ ದಿನಾಚರಣೆಗಳನ್ನು ನಡೆಸಲಿ. ಅದನ್ನು ಬಿಟ್ಟು ವೋಟಿಗಾಗಿ ಟಿಪ್ಪು ಜಯಂತಿ ನಡೆಸುವ ಮೂಲಕ ಸಮಾಜದ ಶಾಂತಿ ಕದಡುತ್ತಿದೆ’ ಎಂದು ಆರೋಪಿಸಿದರು.
ಟಿಪ್ಪುವಿನ ವಿರೋಧವಾಗಿ ಮಾತನಾಡುವಿರಾ? ಎಂಬ ಪ್ರಶ್ನೆಗೆ, ‘ಈಗ ಸರ್ಕಾರ ಹೇಳುತ್ತಿರುವುದೇ ವಿರುದ್ಧದ ಮಾತುಗಳು. ಸಮಾರಂಭದಲ್ಲಿ ನಾನು ಸತ್ಯ ಮುಂದಿಡುತ್ತೇನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.