ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ (ಕೆಪಿಸಿಸಿ) ಜಿ. ಪರಮೇಶ್ವರ ಅವರು ಶನಿವಾರಕ್ಕೆ (ಅ.28) ಏಳು ವರ್ಷ ಪೂರ್ಣಗೊಳಿಸಿದ್ದಾರೆ.
2010ರಲ್ಲಿ ಪಕ್ಷದ ಚುಕ್ಕಾಣಿ ಹಿಡಿದಿದ್ದ ಪರಮೇಶ್ವರ, 2013ರ ವಿಧಾನಸಭೆ ಮತ್ತು 2014ರ ಲೋಕಸಭೆ ಚುನಾವಣೆ ಅವಧಿಯಲ್ಲಿ ಪಕ್ಷದ ಸಾರಥ್ಯ ವಹಿಸಿದ್ದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಿಂದ ಕಡಿಮೆ ಅಂತರದಿಂದ ಅವರು ಸೋಲು ಅನುಭವಿಸಿದ್ದರು. ಬಳಿಕ, ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಅವರು, ಕೆ.ಜೆ. ಜಾರ್ಜ್ ರಾಜೀನಾಮೆಯಿಂದ ತೆರವಾಗಿದ್ದ ಗೃಹ ಖಾತೆಯನ್ನು ಒಂದು ವರ್ಷ ಏಳು ತಿಂಗಳು ನಿಭಾಯಿಸಿದ್ದರು.
ಸಂಘಟನೆಗೆ ಒತ್ತು ನೀಡುವ ಉದ್ದೇಶದಿಂದ ಪಕ್ಷದ ಹೈಕಮಾಂಡ್ ಪರಮೇಶ್ವರ ಅವರನ್ನು ಎರಡನೇ ಅವಧಿಗೆ ಅಧ್ಯಕ್ಷರಾಗಿ ಮುಂದುವರೆಸಿತ್ತು. ಅಲ್ಲದೆ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚನೆಯನ್ನೂ ನೀಡಿತ್ತು.