ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಿಮಾನಯಾನ ಸಂಸ್ಥೆಗಳಲ್ಲಿ ಶೇಕಡ ನೂರರಷ್ಟು ವರ್ಗ ಸಿ ಮತ್ತು ಡಿ ವೃಂದದ ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲು ಇಡಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ ಸಿದ್ದರಾಮಯ್ಯ ತಾಕೀತು ಮಾಡಿದರು. ದೇವನಹಳ್ಳಿ ಕೆಂಪೇಗೌಡ ಆಂತರರಾಷ್ಟ್ರೀಯ ನಿಮಾನ ನಿಲ್ದಾಣದ ಕಚೇರಿ ಸಭಾಂಗಣದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿ ಅನುಷ್ಠಾನ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಈ ವಿಮಾನನಿಲ್ದಾಣದಲ್ಲಿ 37 ವಿವಿಧ ಖಾಸಗಿ ಕಂಪೆನಿಗಳು ವಾಯಮಾರ್ಗಗಳಲ್ಲಿ ಹಾರಾಟ ನಡೆಸುತ್ತಿವೆ. ಈ ಸಂಸ್ಥೆಗಳಲ್ಲಿ ವರ್ಗ ಸಿ ಮತ್ತು ಡಿ ವೃಂದದ ಹುದ್ದೆಗಳಲ್ಲಿ ಶೇಕಡ 60 ರಷ್ಟು ಕನ್ನಡಿಗರು ಮಾತ್ರ ಉದ್ಯೋಗಗಳಾಗಿದ್ದಾರೆ. ಇನ್ನುಳಿದ ಹುದ್ದೆಗಳನ್ನು ಕನ್ನಡಿಗರು ಅದರಲ್ಲೂ ಸ್ಥಳೀಯರಿಗೆ ಅವಕಾಶ ನೀಡಬೇಕು ಎಂದರು.
ವಿಮಾನ ನಿಲ್ದಾಣ ಕನ್ನಡ ಉನ್ನತೀಕರಣ ಸಮಿತಿ ಉಪಾಧ್ಯಕ್ಷ ವೆಂಕಟರಮಣ ಮಾತನಾಡಿ, ವಾರ್ಷಿಕವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ದಸರಾ ಕನ್ನಡ ರಾಜ್ಯೋತ್ಸವ ವಿವಿಧ ರಾಷ್ಟ್ರೀಯ ಮತ್ತು ನಾಡಹಬ್ಬಗಳನ್ನು ಆಚರಿಸಲಾಗುತ್ತಿದೆ. ನಾಮಫಲಕ ಹಾಗೂ ಸಂಕೇತ ಫಲಕಗಳಲ್ಲಿ ಕನ್ನಡವನ್ನು ಬಳಸಲಾಗುತ್ತಿದೆ ಎಂದು ತಿಳಿಸಿದರು.
ಅಂತರರಾಜ್ಯ ಮತ್ತು ಅಂತರರಾಷ್ಟ್ರೀಯ ಪ್ರಯಾಣಿಕರಲ್ಲಿ ರಾಜ್ಯದ ಸಂಸ್ಕೃತಿ, ಕನ್ನಡ ಪ್ರಜ್ಞೆ ಮೂಡಿಸಲು ದಿನಪತ್ರಿಕೆ, ಪುಸ್ತಕ, ಜಾಹೀರಾತುಗಳಲ್ಲಿ ಕನ್ನಡ ಬಳಸಬೇಕು. ಕನ್ನಡ ಚಲನಚಿತ್ರ ಮತ್ತು ಗೀತೆಗಳನ್ನು ಕೇಳಿಸಬೇಕು. ಅತ್ಯುತ್ತಮ ಕನ್ನಡ ಚಲನಚಿತ್ರಗಳನ್ನು ಪ್ರದರ್ಶಿಸಬೇಕು, ಕನ್ನಡ ಭಾಷೆ ಪರಿಣಾಮಕಾರಿಯಾಗಲು ಇನ್ನಷ್ಟು ಹೊಸಬಗೆಯ ಕನ್ನಡ ಕಾರ್ಯಕ್ರಮಗಳನ್ನು ರೂಪಿಸಿ ವಿಮಾನ ಸಂಸ್ಥೆಗಳು ಜಾಗತಿಕ ಮಟ್ಟದಲ್ಲಿ ಸಾಂಸ್ಕೃತಿಕ ರಾಮಭಾರಿಗಳಾಗಿ ಕಾರ್ಯನಿರ್ವಹಿಸಬೇಕು ಎಂದರು.
ಕೆಂಪೇಗೌಡ ವಿಮಾನ ನಿಲ್ದಾಣದ ಅಧಿಕೃತ ವೆಬ್ ಸೈಟ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು, ವಿಮಾನ ನಿಲ್ದಾಣದಲ್ಲಿ ಕನ್ನಡ ಪುಸ್ತಕ ಮಾರಾಟ ಮಳಿಗೆ ಆರಂಭ ಮಾಡಬೇಕು, ಸಿಬ್ಬಂದಿ ಕನ್ನಡದಲ್ಲಿ ವ್ಯವಹರಿಸಲು ಸೂಚಿಸಬೇಕು ಎಂದರು. ಕನ್ನಡ ಕಲಿಕಾ ತರಬೇತಿಗಳನ್ನು ಆಯೋಜಿಸಬೇಕಾಗಿದೆ ಎಂದರು. ಪ್ರಾಧಿಕಾರದ ಸದಸ್ಯರಾದ ಸಾಹಿತಿ ಡಾ. ಸಿದ್ದಲಿಂಗಯ್ಯ, ಮುಖ್ಯಮಂತ್ರಿ ಚಂದ್ರು, ರಿಜಿಸ್ಟಾರ್ ಮುರಳಿಧರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.