ಬೀದರ್: ‘ಪುಷ್ಪುಲ್ ರೈಲು ದಿನಕ್ಕೆ ಎರಡು ಬಾರಿ ಬೀದರ್ನಿಂದ ಕಲಬುರ್ಗಿಗೆ ಹೋಗಿ ಬರಲಿದೆ. ಬೀದರ್ನಿಂದ ಕಲಬುರ್ಗಿಗೆ ತಲುಪಲು ಕನಿಷ್ಠ 3 ತಾಸು 50 ನಿಮಿಷ ಬೇಕಾಗಲಿದೆ’ ಎಂದು ಸಿಕಂದರಾಬಾದ್ನ ದಕ್ಷಿಣ ಮಧ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅಮಿತ್ ವರದಾನ್ ಹೇಳಿದರು.
‘ಮೊದಲು ಬೀದರ್–ಹುಮನಾಬಾದ್ ಮಧ್ಯೆ ಬುಧವಾರ ರೈಲು ಸಂಚಾರ ಇರಲಿಲ್ಲ. ಬೀದರ್–ಕಲಬುರ್ಗಿ ನಡುವೆ ಭಾನುವಾರ ಪುಷ್ಪುಲ್ ರೈಲು ಸಂಚರಿಸುವುದಿಲ್ಲ’ ಎಂದು ನಗರದಲ್ಲಿ ಶುಕ್ರವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.
‘ಬರುವ ದಿನಗಳಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಪರಿಗಣನೆಗೆ ತೆಗೆದುಕೊಂಡು ರೈಲಿನ ವೇಗವನ್ನು ಹೆಚ್ಚಿಸಲಾಗುವುದು. ಪ್ರಯಾಣ ದರ ಇನ್ನೂ ನಿಗದಿ ಮಾಡಿಲ್ಲ. ಬೀದರ್–ಕಲಬುರ್ಗಿ ನಡುವಿನ ಅಂತರ ಕಿ.ಮೀ ಲೆಕ್ಕ ಹಾಕಿದರೆ ಅಂದಾಜು ₹ 30 ಆಗಬಹುದು’ ಎಂದು ಹೇಳಿದರು.
‘ಬೀದರ್ ರೈಲ್ವೆ ನಿಲ್ದಾಣದ ಪ್ಲಾಟ್ಫಾರ್ಮ್ 3 ರಲ್ಲಿ ಹೆಚ್ಚುವರಿ ಟಿಕೆಟ್ ಕೌಂಟರ್ ಆರಂಭಿಸಲಾಗುವುದು. ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ದೂರುಗಳು ಬಂದಿದ್ದು, ರೈಲ್ವೆ ಪೊಲೀಸರ ಸಂಖ್ಯೆಯನ್ನೂ ಹೆಚ್ಚಿಸಲಾಗುವುದು’ ಎಂದು ತಿಳಿಸಿದರು. ಹಿರಿಯ ಉಪ ಪ್ರಧಾನ ವ್ಯವಸ್ಥಾಪಕ ಸುಮಿತ್ ಶರ್ಮಾ ಇದ್ದರು.