ಜಬ್ಬಲ್ಪುರ, ಅ. 28– ರಾಷ್ಟ್ರವನ್ನು ಸಮಾಜವಾದದ ಗುರಿಯತ್ತ ಮುನ್ನಡೆಸಲು, ಕಾಂಗ್ರೆಸ್ಸಿನ ದಶಾಂಶ ಆರ್ಥಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಜಾರಿಗೆ ತರಲು ಸರ್ಕಾರ ಒಪ್ಪಿದೆ.
ಈ ನಿರ್ಧಾರವನ್ನು ಎ.ಐ.ಸಿ.ಸಿ. ಯಲ್ಲಿ ಇಂದು ಪ್ರಕಟಿಸಿದ ಪ್ರಧಾನಮಂತ್ರಿ ಇಂದಿರಾಗಾಂಧಿಯವರು, ರಾಷ್ಟ್ರದ ಹಿತಕ್ಕಾಗಿ ಈ ಕಾರ್ಯಕ್ರಮಗಳನ್ನು ಎಷ್ಟರಮಟ್ಟಿಗೆ ಜಾರಿಗೆ ತರಬೇಕೆಂಬುದು ಸರ್ಕಾರ ಹಾಗೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಮುಂದಿರುವ ಪ್ರಶ್ನೆ ಎಂದರು. ಈ ಕಾರ್ಯಕ್ರಮಗಳನ್ನು ಕಾರ್ಯಕಾರಿ ಸಮಿತಿ ಶುಕ್ರವಾರ ಪರಿಶೀಲಿಸಿತು.
**
ಅಲ್ಲಿ... ಇಲ್ಲಿ
ಬೆಂಗಳೂರು, ಅ. 28– ಡೆನ್ಮಾರ್ಕಿನಲ್ಲಿ ಒಂದು ಡೈರಿ ಯೋಜನೆ, ದಿನಕ್ಕೆ 1.8 ಟನ್ ಹಾಲಿನ ಉತ್ಪಾದನಾ ಸಾಮರ್ಥ್ಯ. ಬೆಂಗಳೂರು ಡೈರಿಯಷ್ಟೇ ಪ್ರಮಾಣ. ಅಲ್ಲಿ ಅದರ ಉಸ್ತುವಾರಿಗೆ ಕೇವಲ ಎಂಟು ಜನ ಅಧಿಕಾರಿಗಳು. ಇಲ್ಲಿ?– 262 ಜನ ನೌಕರರು.
ಡೆನ್ಮಾರ್ಕಿಗೆ ಭೇಟಿ ನೀಡಿ ಮರಳಿದ ಅಭಿವೃದ್ಧಿ ಕಮಿಷನರ್ ಶ್ರೀ ಜಿ.ವಿ.ಕೆ. ರಾವ್ ಅವರು ಈ ಚಿತ್ರವನ್ನು ಇಂದು ಇಲ್ಲಿ ವಿವರಿಸಿದರು.
ಅಲ್ಲಿ ಅಷ್ಟೇ ಜನ ನೌಕರರಿದ್ದರೂ ಕವಾಡಿಗ ಹಣ ಪಡೆಯಲು 30 ಸೆಕೆಂಡ್ ಸಾಕು. ಆದರೆ ಇಲ್ಲಿ ತಿಂಗಳುಗಟ್ಟಲೆ ಅಲೆಯಬೇಕಾಗುತ್ತದೆ.
‘ಅಲ್ಲಿ ಇಡೀ ಸಮಾಜ ಸಹಕಾರಿ ರಂಗದ ಆಧಾರದ ಮೇಲೆ ನಡೆಯುತ್ತಿದ್ದರೂ ಸಹಕಾರ ಯೂನಿಯನ್ನಿನ ಸೆಕ್ರೆಟರಿ ಜನರಲ್ ಮಾತ್ರ ಏಕೈಕ ಅಧಿಕಾರಿ. ಆದರೆ ಇಲ್ಲಿ ಸಹಕಾರ ಸಂಘಗಳ ನೊಂದಾಣಿಕೆಗೆ ಅವುಗಳ ವಿಸರ್ಜನೆಗೆ ಎಷ್ಟೊಂದು ಜನ ಅಧಿಕಾರಿಗಳು! ಎಂದು ಅವರು ನುಡಿದರು.
**
13 ಲಕ್ಷ ಟನ್ ಆಹಾರ ಭಾರತಕ್ಕೆ ಆಮದು
ನವದೆಹಲಿ, ಅ. 28– ಈ ವರ್ಷದ ಅಂತ್ಯದವರೆಗೆ ರಾಷ್ಟ್ರದ ಅವಶ್ಯಕತೆಯ ಪೂರೈಕೆಗಾಗಿ ಅಮೆರಿಕ ಮತ್ತು ಭಾರತ ನೆರವು ಕೂಟದ ಇತರ ರಾಷ್ಟ್ರಗಳಿಂದ 1.3 ದಶಲಕ್ಷ ಟನ್ ಆಹಾರ ಧಾನ್ಯಗಳನ್ನು ಭಾರತ ಆಮದು ಮಾಡಿಕೊಳ್ಳಲಿದೆ.