ನವದೆಹಲಿ: ಇನ್ನು ಮುಂದೆ ವಿಮಾನ ನಿಲ್ದಾಣ ಪ್ರವೇಶಕ್ಕೆ ಮೊಬೈಲ್ನಲ್ಲಿರುವ ಆಧಾರ್ ಅನ್ನು ಗುರುತಿನ ಚೀಟಿಯಾಗಿ ತೋರಿಸಬಹುದು ಎಂದು ಇದೇ 26ರಂದು ನಾಗರಿಕ ವಿಮಾನಯಾನ ಭದ್ರತಾ ಬ್ಯೂರೊ (ಬಿಸಿಎಎಸ್) ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದೆ.
ಅಲ್ಲದೆ, ಪೋಷಕರ ಜೊತೆ ವಿಮಾನ ನಿಲ್ದಾಣ ಪ್ರವೇಶಿಸುವ ಮಕ್ಕಳಿಗೆ ಪ್ರತ್ಯೇಕ ಗುರುತಿನ ಚೀಟಿ ತೋರಿಸುವ ಅಗತ್ಯವಿಲ್ಲ ಎಂದೂ ತಿಳಿಸಲಾಗಿದೆ.
ಬಿಸಿಎಎಸ್ ಈ ಮೊದಲು ತಿಳಿಸಿರುವ ಹಲವು ಬಗೆಯ ಗುರ್ತಿನ ಚೀಟಿಯ ಜೊತೆಗೆ ಈಗ ಮೊಬೈಲ್ ಆಧಾರ್ ಕೂಡ ಹೊಸತಾಗಿ ಸೇರ್ಪಡೆಯಾಗಿದೆ.
ಟಿಪ್ಪರ್ ಡಿಕ್ಕಿ: ಆರು ಸಾವು
ಅಮರಾವತಿ (ಪಿಟಿಐ): ಪೂರ್ವ ಗೋದಾವರಿ ಜಿಲ್ಲೆಯ ಮೊಡೆಕ್ಕುರಿಯಲ್ಲಿ ಟಿಪ್ಪರ್, ಆಟೊವೊಂದಕ್ಕೆ ಡಿಕ್ಕಿ ಹೊಡೆದು ಆರು ಮಹಿಳೆಯರು ಮೃತಪಟ್ಟಿದ್ದಾರೆ.
‘ಅಲ್ಲವರಮ್ ಗ್ರಾಮದ ಮಹಿಳೆಯರು ವೆಂಕಟೇಶ್ವರ ದೇವಾಲಕ್ಕೆ ಹೋಗುತ್ತಿದ್ದ ವೇಳೆ ವೇಗವಾಗಿ ಚಲಿಸುತ್ತಿದ್ದ ಅಪಘಾತ ಸಂಭವಿಸಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಗೆ ಮರಳಿದ ಸೋನಿಯಾ ಗಾಂಧಿ
ನವದೆಹಲಿ (ಪಿಟಿಐ): ಹೊಟ್ಟೆನೋವಿನ ತೊಂದರೆಯಿಂದ ಶುಕ್ರವಾರ ಇಲ್ಲಿನ ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದ ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಅವರು ಗುಣಮುಖರಾಗಿ ಶನಿವಾರ ಮನೆಗೆ ಮರಳಿದ್ದಾರೆ.
‘ಸೋನಿಯಾ ಅವರ ಆರೋಗ್ಯ ಸ್ಥಿರವಾಗಿದೆ. ವಿಶ್ರಾಂತಿ ಪಡೆಯಲು ಸೂಚಿಸಲಾಗಿದೆ’ ಎಂದು ಆಸ್ಪತ್ರೆಯ ಅಧ್ಯಕ್ಷ ಡಾ. ಡಿ.ಎಸ್ ರಾಣಾ ತಿಳಿಸಿದ್ದಾರೆ.
ಬಿಹಾರ: ನಕಲಿ ಮದ್ಯಕ್ಕೆ ನಾಲ್ಕು ಬಲಿ
ಪಟ್ನಾ (ಪಿಟಿಐ): ಬಿಹಾರದ ರೋಹ್ಟಾಸ್ ಜಿಲ್ಲೆಯ ದನ್ವಾರ್ ಗ್ರಾಮದಲ್ಲಿ ನಕಲಿ ಮದ್ಯ ಸೇವಿಸಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಈ ಸಂಬಂಧ ಎಂಟು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ರಮವಾಗಿ ನಕಲಿ ಮದ್ಯ ತಂದು ಮಾರಿದ್ದಾರೆ ಎಂದು ಶಂಕಿಸಲಾದ ಮೂವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ನಕಲಿ ಮದ್ಯ ಸೇವಿಸಿದ್ದರಿಂದ ಸಾವನ್ನಪ್ಪಿದ್ದಾರೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ಏಪ್ರಿಲ್ನಲ್ಲಿ ಬಿಹಾರದಲ್ಲಿ ನಿತಿಶ್ ಕುಮಾರ್ ಸರ್ಕಾರ ಮದ್ಯ ಮಾರಾಟ ಮತ್ತು ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.