ಹಾವೇರಿ: ಇಲ್ಲಿನ ಜಿಲ್ಲಾ ಪಂಚಾಯ್ತಿಯ ನೂತನ ಆಡಳಿತ ಭವನಕ್ಕೆ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರ ಹೆಸರಿಡುವ ನಿರ್ಣಯವನ್ನು ಶನಿವಾರ ನಡೆದ ಸಾಮಾನ್ಯ ಸಭೆ ಅಂಗೀಕರಿಸಿತು.
ನಡಾವಳಿಯಲ್ಲಿ ಸೇರಿಸಿದ್ದ ಈ ವಿಷಯವನ್ನು ಕಾಂಗ್ರೆಸ್ನ ಏಕನಾಥ ಬಾನುವಳ್ಳಿ ಪ್ರಸ್ತಾಪಿಸಿದರು. ಇದಕ್ಕೆ ಬಿಜೆಪಿಯ ಸಿದ್ದರಾಜ ಕಲಕೋಟಿ, ವಿರೂಪಾಕ್ಷಪ್ಪ ಕಡ್ಲಿ ವಿರೋಧಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಬಿ.ಅಂಜನಪ್ಪ ಮಾತನಾಡಿ, ‘ನಿಯಮ ಪ್ರಕಾರ ಹೆಸರಿಡುವ ಅಧಿಕಾರ ಸಭೆಗೆ ಇಲ್ಲ. ಹೀಗಾಗಿ ನಿರ್ಣಯ ಅಂಗೀಕರಿಸಲು ಬರುವುದಿಲ್ಲ’ ಎಂದರು.
ಜಿ.ಪಂ. ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಮಾತನಾಡಿ, ‘ಕೋಳಿವಾಡ ಅವರ ಹೆಸರಿಡುವ ನಿರ್ಣಯವನ್ನು ಸಭೆ ಅಂಗೀಕರಿಸಿದೆ. ಅಲ್ಲದೇ, ಈ ನಿರ್ಣಯದಲ್ಲಿ ಸಿ.ಇ.ಒ ಅವರ ಹೇಳಿಕೆಯನ್ನೂ ದಾಖಲಿಸಬೇಕು’ ಎಂದರು.