ಬಾಳೆಹೊನ್ನೂರು: ಇಲ್ಲಿಗೆ ಸಮೀಪದ ಸೀಕೆ ವಾಟ್ಕೊಡಿಗೆ ಬಳಿಯ ಅರಣ್ಯ ಇಲಾಖೆಯ ನೆಡುತೋಪಿನಲ್ಲಿ ಅಕ್ರಮವಾಗಿ ಸಾಗುವಾನಿ ಮರ ಕಡಿದು ಸಾಗಣೆ ಮಾಡುತ್ತಿದ್ದ ಆರೋಪದ ಮೇರೆಗೆ ವಾಹನವನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಅರೋಪಿಗಳು ನಾಪತ್ತೆಯಾಗಿದ್ದಾರೆ.
ಆಶೋಕ ಲೈಲ್ಯಾಂಡ್ ಗೂಡ್ಸ್ ಆಟೋದಲ್ಲಿ ಮರದ ತುಂಡುಗಳನ್ನು ಸಾಗಿಸಲು ಯತ್ನಿಸುತ್ತಿದ್ದದ್ದನ್ನು ಕಂಡ ಅಧಿಕಾರಿಗಳು ಅದನ್ನು ಬೆನ್ನಟ್ಟಿದ್ದರು. ಆಗ ಆರೋಪಿಗಳು ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಆಟೊ ಹಾಗೂ ಸುಮಾರು ₹30 ಸಾವಿರ ಮೌಲ್ಯದ 6 ತುಂಡುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗೂಡ್ಸ್ ಆಟೋದಲ್ಲಿ ವಾಟ್ ಕೊಡಿಗೆಯ ರೋನಾಲ್ಡ್ ಪ್ರದೀಪ್ ಅವರಿಗೆ ಸೇರಿದ ವಾಹನದ ದಾಖಲೆಗಳು ಪತ್ತೆಯಾಗಿದ್ದು, ಅದನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಅಧಿಕಾರಿಗಳು ಬಲೆ ಬೀಸಿದ್ದಾರೆ.
ಬ್ಯಾಟರಿ ಕಳವು ಇಬ್ಬರ ಬಂಧನ
ಮಂಗಳೂರು: ಇಬ್ಬರು ಬ್ಯಾಟರಿ ಕಳ್ಳರನ್ನು ಬಂಧಿಸಿರುವ ಮಂಗಳೂರು ದಕ್ಷಿಣ (ಪಾಂಡೇಶ್ವರ) ಠಾಣೆ ಪೊಲೀಸರು, ಆರೋಪಿಗಳಿಂದ ₹ 3.20 ಲಕ್ಷ ಮೌಲ್ಯದ 20 ಬ್ಯಾಟರಿಗಳು ಮತ್ತು ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಟ್ವಾಳ ತಾಲ್ಲೂಕಿನ ಕುಕ್ಕಾಜೆಯ ಮಹಮ್ಮದ್ ಆಸೀಫ್ ಅಲಿಯಾಸ್ ಆಸೀಫ್ (24) ಹಾಗೂ ತುಂಬೆ ಗ್ರಾಮದ ನಿವಾಸಿ ಹಬೀಬ್ ರೆಹಮಾನ್ (36) ಬಂಧಿತರು.
ನಗರದ ಅತ್ತಾವರದ ಅಯ್ಯಪ್ಪ ಗುಡಿ ಎದುರಿನ ಮೈದಾನದಲ್ಲಿ ನಿಲ್ಲಿಸಿದ್ದ ಲಾರಿ ಹಾಗೂ ಜೆಸಿಬಿಗಳ ಆರು ಬ್ಯಾಟರಿಗಳನ್ನು ಅಕ್ಟೋಬರ್ 18ರಂದು ಕಳವು ಮಾಡಲಾಗಿತ್ತು. ಈ ಸಂಬಂಧ ಅಕ್ಷಿತ್ ಎಂಬುವವರು ನೀಡಿದ್ದ ದೂರಿನ ಬಗ್ಗೆ ತನಿಖೆ ನಡೆಸಿದ ದಕ್ಷಿಣ ಠಾಣೆ ಇನ್ಸ್ಪೆಕ್ಟರ್ ಕೆ.ಯು.ಬೆಳ್ಳಿಯಪ್ಪ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ.
ಆರೋಪಿಗಳು ನಗರದ ಸೂಟರ್ ಪೇಟೆಯಲ್ಲಿ ಗುರುವಾರ ಇರುವ ಖಚಿತ ಮಾಹಿತಿ ಸಂಗ್ರಹಿಸಿದ ಪೊಲೀಸರು ಅವರನ್ನು ಬಂಧಿಸಿದ್ದಾರೆ.