ಸಿಂದಗಿ: ಶಿಕ್ಷಕರ ಬೇಡಿಕೆಗಾಗಿ ಆಗ್ರಹಿಸಿ ಗ್ರಾಮಸ್ಥರು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ ಘಟನೆ ತಾಲ್ಲೂಕಿನ ಖೈನೂರ ಗ್ರಾಮದ ಶಾಂತವೀರ ನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದಿದೆ.
ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ರಂಗಪ್ಪ ಬಶೆಟ್ಟಿ ನೇತೃತ್ವದಲ್ಲಿ ಗ್ರಾಮಸ್ಥರು ಬೆಳಿಗ್ಗೆ ಶಾಲೆಗೆ ಬಂದ ಶಾಲಾ ಮಕ್ಕಳನ್ನು ಹೊರ ಕಳುಹಿಸಿ ಶಾಲಾ ಕೊಠಡಿಗಳಿಗೆ ಬೀಗ ಹಾಕಿ ಪ್ರತಿಭಟನೆ ಪ್ರಾರಂಭಿಸಿದರು. ಬಿಇಓ ವಿರುದ್ದ ಗ್ರಾಮಸ್ಥರು ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಶಾಂತಗೌಡ ಬಿರಾದಾರ, ರಂಗಪ್ಪ ಬಶೆಟ್ಟಿ ಮಾತನಾಡಿ, 44 ಮಕ್ಕಳನ್ನೊಳಗೊಂಡು ಒಂದರಿಂದ ಐದನೆಯ ತರಗತಿಯವರೆಗೆ ವರ್ಗಗಳಿವೆ. ಆದರೆ ಇಲ್ಲಿರುವವರು ಓರ್ವ ಶಿಕ್ಷಕಿ ಮಾತ್ರ. ಕಳೆದ ಎರಡು ತಿಂಗಳುಗಳ ಹಿಂದೆ ಶಾಲೆಯ ಮುಖ್ಯ ಶಿಕ್ಷಕ ಬೋಜಪ್ಪಗೌಡ ಬಿರಾದಾರ ಅಪಘಾತದಲ್ಲಿ ಮೃತರಾದಾಗಿನಿಂದ ಬೇರೆ ಶಿಕ್ಷಕರನ್ನು ಈ ಶಾಲೆಗೆ ಕಳುಹಿಸಿಲ್ಲ.
ಈ ಬಗ್ಗೆ ಬಿಇಓ ಅವರಿಗೆ ಸಾಕಷ್ಟು ಸಲ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಬಿಇಓ ಖೈನೂರ ಗ್ರಾಮಕ್ಕೆ ಬಂದು ಆರ್.ಎಂ.ಎಸ್.ಎ ಶಾಲಾ ಕಟ್ಟಡ ವೀಕ್ಷಣೆ ಮಾಡಿ ಹೋಗಿದ್ದಾರೆ ವಿನಾ ಈ ಶಾಲೆಗೆ ಬಂದಿಲ್ಲ ಎಂದು ಬಿಇಓ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಶಾಲೆಗೆ ಶಿಕ್ಷಕರನ್ನು ನೇಮಕ ಮಾಡುವ ತನಕ ಶಾಲಾ ಕೊಠಡಿಗಳ ಬೀಗ ತೆಗೆಯುವದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದು ಬೀಗ ಹಾಕುವ ಪ್ರತಿಭಟನೆ ಸೋಮವಾರವೂ ಮುಂದುವರೆಯಲಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಶಾಲಾ ಮಕ್ಕಳು ಗ್ರಾಮಸ್ಥರಾದ ಹಣಮಂತರಾಯ ಹಯ್ಯಾಳ, ನಿಂಗಣ್ಣ ಬಿರಾದಾರ, ಅಕ್ಕಮಹಾದೇವಿ ಬಶೆಟ್ಟಿ, ಅನುಸುಬಾಯಿ ಬಿಲ್ಲಾಳ, ಶರಣಗೌಡ ಇಜೇರಿ, ರಮೇಶ ಬಿರಾದಾರ, ಶಿವಲಿಂಗಪ್ಪ ಶೀಲವಂತ ಮುಂತಾದವರು ಪಾಲ್ಗೊಂಡಿದ್ದರು.