ಬೀದರ್: ಹಿಂದಿನ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಅಗತ್ಯ ಹಣ ನೀಡಿದ್ದರೆ ಕನಿಷ್ಠ ಏಳು ವರ್ಷಗಳ ಹಿಂದೆಯೇ ಈ ಮಾರ್ಗ ಅನುಷ್ಠಾನಗೊಳ್ಳುತ್ತಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಾಗ್ದಾಳಿ ನಡೆಸಿದರು.
ಬೀದರ್–ಕಲಬುರ್ಗಿ ನೂತನ ರೈಲು ಮಾರ್ಗ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಬೀದರ್ ರೈಲು ನಿಲ್ದಾಣದಲ್ಲಿ ಬೀದರ್–ಕಲಬುರ್ಗಿ ರೈಲಿಗೆ ಹಸಿರು ನಿಶಾನೆ ತೋರಿಸಿದರು. ಬಳಿಕ ಬೀದರ್ನ ನೆಹರೂ ಕ್ರೀಡಾಂಗಣದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಭಾಷಣ ಮಾಡಿದರು.
ಈ ನೂತನ ರೈಲು ಮಾರ್ಗದಿಂದಾಗಿ ಬೀದರ್ನಿಂದ ಈಗ ಬೆಂಗಳೂರು, ಮುಂಬಯಿ ಹತ್ತಿರ ಆಗಿದೆ. ಈ ನೂತನ ರೈಲು ಮಾರ್ಗದಿಂದ ಬೀದರ್ ಜನರಿಗೆ ಬೆಂಗಳೂರು ಮತ್ತು ಮುಂಬಯಿ ಹತ್ತಿರವಾಗಿದೆ ಎಂದು ಮೋದಿ ಹೇಳಿದರು.
ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ರೂಪಿಸಿದ ಯೋಜನೆ ಇದು. ಇದರ ಅನುಷ್ಠಾನಕ್ಕೆ 20 ವರ್ಷ ತಗುಲಿತು. ಮೂರು ವರ್ಷದಲ್ಲಿ ಆಗಬೇಕಾದ ಕಾಮಗಾರಿಗೆ 20 ವರ್ಷ ತಗುಲಿತು. ಇದಕ್ಕೆ ದುಃಖ ಆಗುತ್ತದೆ ಎಂದರು.
ಯೋಜನೆಗಳನ್ನು ಅರ್ಧಕ್ಕೆ ಬಿಡುವುದು ಕಾಂಗ್ರೆಸ್ ಸಂಸ್ಕೃತಿ. ‘ಅಟಕಾನಾ, ಬಟಕಾನಾ, ಲಟಕಾನಾ’(ಸಿಗಸಿಹಾಕುವುದು, ಅಲೆದಾಡಿಸುವುದು, ನೇತಾಡುವುದು) ಇದು ಕಾಂಗ್ರೆಸ್ ಸಂಸ್ಕೃತಿ. ನಾವು ಇದಕ್ಕೆ ತಿಲಾಂಜಲಿ ನೀಡಿದ್ದೇವೆ ಎಂದು ಮೋದಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಹಿಂದಿನ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಅಗತ್ಯ ಹಣ ನೀಡಿದ್ದರೆ ಕನಿಷ್ಠ ಏಳು ವರ್ಷಗಳ ಹಿಂದೆಯೇ ಈ ಮಾರ್ಗ ಅನುಷ್ಠಾನಗೊಳ್ಳುತ್ತಿತ್ತು ಎಂದರು.
ನಿಮ್ಮ ಸಂಸದ ಭಗವಂತ ಖೂಬಾ ಬಹಳ ಸಕ್ರೀಯ ಸಂಸದರು. ಕರ್ನಾಟಕದ ಎಲ್ಲ ಸಂಸದರು ಬಂದು ನಮಗೆ ಹೇಳುತ್ತಿದ್ದರು. ಈ ಮಾರ್ಗ ಬೇಗ ಮುಗಿಸಿ ಎಂದು. ಈ ಮಾರ್ಗದ ಶೇಕಡಾ 60ರಿಂದ 70ರಷ್ಟು ಕಾಮಗಾರಿ ನಮ್ಮ ಸರ್ಕಾರ ಬಂದ ನಂತರ ಆಗಿದೆ ಎಂದರು.