ಖಾನಾಪುರದ ರೈಲು ನಿಲ್ದಾಣದಲ್ಲಿ ಹಣ್ಣು ಮಾರುತ್ತ ಜೀವನ ಆರಂಭಿಸಿದ್ದ ಅಬ್ದುಲ್ ಕರೀಂಲಾಲ್ ತೆಲಗಿ ಮುಂದೊಂದು ದಿನ ದೇಶದ ಆರ್ಥಿಕತೆಯ ಬುಡ ಅಲ್ಲಾಡಿಸುವಂತಹ ಅಪರಾಧ ಎಸಗುತ್ತಾನೆಂದರೆ ನಂಬಲು ಅಸಾಧ್ಯ. ಸುಮಾರು ₹ 30 ಸಾವಿರ ಕೋಟಿ ಮೌಲ್ಯದ ನಕಲಿ ಛಾಪಾ ಕಾಗದಗಳನ್ನು ಮುದ್ರಿಸಿದವನ ಅಂತ್ಯ ಮಾತ್ರ ಅತ್ಯಂತ ದಯನೀಯವಾಗಿತ್ತು.
ತೆಲಗಿಯ ಬುಡಮೇಲು ಕೃತ್ಯಕ್ಕೆ ಸಾಥ್ ನೀಡಿದ್ದ ಅಧಿಕಾರಿಗಳು, ರಾಜಕಾರಣಿಗಳು ಮತ್ತು ಪೊಲೀಸರು ಅವನ ಮರಣಾನಂತರ ನಿಟ್ಟುಸಿರುಬಿಟ್ಟಿರಬೇಕು. ತೆಲಗಿಯ ಅನ್ಯಾಯದ ಹಣ ರಾಜ್ಯದಲ್ಲಿ ಅನೇಕ ಅನ್ಯಾಯಗಳನ್ನು ಮುಚ್ಚಿಹಾಕಲು ಬಳಕೆಯಾಗಿದ್ದು ಸುದ್ದಿಯಾಗಿತ್ತು.
16 ವರ್ಷಗಳ ಕಾಲ ಕಾರಾಗೃಹದಲ್ಲಿದ್ದ ತೆಲಗಿ, ತಾನು ನಡೆಸಿದ ಅಕ್ರಮಗಳ ಬಗ್ಗೆ ಸುಮಾರು 1600 ಪುಟಗಳಷ್ಟು ವಿವರವನ್ನು ಬರೆದಿಟ್ಟಿದ್ದಾನಂತೆ. ಅದು ಒಂದುವೇಳೆ ಬಹಿರಂಗವಾದರೆ ಹಲವರ ಬಣ್ಣ ಬಯಲಾಗಬಹುದು.
ಛಾಪಾಕಾಗದ ಮುದ್ರಿಸದಿರುವ ಅನೇಕ ‘ತೆಲಗಿಗಳು’ ನಮ್ಮಲ್ಲಿ ಇರುವುದರಿಂದ ಆ ಮಾಹಿತಿ ಕಾರಾಗೃಹದಿಂದ ನಾಪತ್ತೆಯಾಗುವ ಸಾಧ್ಯತೆಯೇ ಹೆಚ್ಚು. ಇಂಥವರಿಂದ ದೇಶದ ರಕ್ಷಣೆ ಹೇಗೆ? -ಗಂಗಾಧರ ಅಂಕೊಲೇಕರ, ಧಾರವಾಡ