ಬಳ್ಳಾರಿ: ‘ಮಾದಿಗ ಸಮುದಾಯದ ಬೇಡಿಕೆ ಈಡೇರಿಸುವ ಪಕ್ಷಕ್ಕೆ ಮುಂದಿನ ವಿಧಾನಸಭೆಯ ಚುನಾವಣೆಯಲ್ಲಿ ಬೆಂಬಲ ನೀಡಲಾಗುವುದು’ ಎಂದು ಮಾದಿಗ ದಂಡೋರದ ರಾಜ್ಯ ಘಟಕದ ಅಧ್ಯಕ್ಷ ಎಂ.ಶಂಕರಪ್ಪ ಹೇಳಿದರು. ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಮಾದಿಗ ದಂಡೋರವು ಭಾನುವಾರ ಏರ್ಪಡಿಸಿದ್ದ ಕಾರ್ಯಕಾರಿಣಿ ಸಭೆ’ಯನ್ನು ಉದ್ಘಾಟಿಸಿ ಮಾತನಾಡಿದರು.
‘ ಚುನಾವಣೆಯಲ್ಲಿ ಮಾದಿಗ ಸಮುದಾಯ ಅಭ್ಯರ್ಥಿಗಳಿಗೆ 20ಕ್ಷೇತ್ರಗಳಲ್ಲಿ ನಿಲ್ಲುವ ಅವಕಾಶ ನೀಡವ ನೀಡುವ ಪಕ್ಷಕ್ಕೆ ಬೆಂಬಲ ಸೂಚಿಸಲಾಗವುದು. ಅಲ್ಲದೇ, ನ್ಯಾ.ಎ.ಜೆ.ಸದಾಶಿವ ವರದಿಯನ್ನು ಅನುಷ್ಠಾನ ಗೊಳಿಸಬೇಕು. ಮಾದಿಗರ ಮೂಲ ಸೌಲಭ್ಯ, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮವನ್ನು ಸ್ಥಾಪಿಸಬೇಕು. ರಾಜ್ಯದ ಜಿಲ್ಲಾ ಕೇಂದ್ರದಲ್ಲಿ 20ಎಕರೆ ಜಮೀನು ನೀಡಬೇಕು ಎಂದು ಒತ್ತಾಯಿಸಿದರು.
‘ ಪರಿಶಿಷ್ಟ ಜಾತಿಗೆ ಮೀಸಲಿಟ್ಟಿರುವ ರಾಜ್ಯ ಸರ್ಕಾರದ ಅನುದಾನದ ಶೇ.40ರಷ್ಟು ಮಾದಿಗ ಮತ್ತು ಅದರ ಸಂಬಂಧಿತ ಸಮುದಾಯಕ್ಕೆ ಮೀಸಲಿಡಬೇಕು. ಸಮುದಾಯದ ಮಠ ಮಾನ್ಯಗಳಿಗೆ ಶಿಕ್ಷಣ ಸಂಸ್ಥೆ, ತಾಂತ್ರಿಕ ಮತ್ತು ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಪ್ರತ್ಯೇಕ ನಿಧಿಯನ್ನು ಸ್ಥಾಪಿಸಿ ಹಣಕಾಸು ನೆರವು ನೀಡಬೇಕು. ರಾಜ್ಯದಲ್ಲಿ ಸಂಪೂರ್ಣ ಮದ್ಯಪಾನ ನಿಷೇಧಿಸುವ, ಹೊರಗುತ್ತಿಗೆ ನೀತಿಯನ್ನು ರದ್ದುಗೊಳಿಸುವ ಪಕ್ಷಕ್ಕೆ ಸಮುದಾಯದಿಂದ ಬೆಂಬ ಸೂಚಿಸಲಾಗುವುದು ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಕಾಶ, ರಾಜ್ಯ ಘಟಕದ ಉಪಾಧ್ಯಕ್ಷ ಜೆ.ಜಗನ್ನಾಥ್, ಖಜಾಂಚಿ ಮುನಿರಾಜು, ಜಂಟಿ ಕಾರ್ಯದರ್ಶಿ ನಾರಾಯಣ ಸ್ವಾಮಿ, ಕಾರ್ಯದರ್ಶಿ ಗಂಜಿಗೆರೆ ರಾಜು, ಜಿಲ್ಲಾ ಕಾರ್ಯದರ್ಶಿ ಸಂಡೂರಪ್ಪ, ಮುಖಂಡರಾದ ರವಿವರ್ಮ, ಎಚ್.ವೆಂಕಟೇಶ, ಕೆ.ರಾಜಶೇಖರ್, ಬಿ.ನಾಗೇಶ್ವರ ರಾವ್ ಇದ್ದರು.