ಮದ್ದೂರು: ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯಗಳನ್ನು ಹತ್ತಿಕ್ಕಲು ಜನರು ಜಾಗೃತರಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಪಿ.ಗೌಡ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಶನಿವಾರ ಆಯೋಜಿಸಿದ್ದ ‘ಮಕ್ಕಳ ಮತ್ತು ಮಹಿಳೆಯರ ಸಂರಕ್ಷಣಾ ಕಾನೂನು’ಗಳು ಹಾಗೂ ‘ಪೋಕ್ಸೊ ಕಾಯ್ದೆ’ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕೇವಲ ಕಾಯ್ದೆ, ಕಾನೂನು ಮೂಲಕ ದೌರ್ಜನ್ಯ ಹತ್ತಿಕ್ಕಲು ಸಾಧ್ಯವಿಲ್ಲ. ಈ ಕುರಿತು ಜನರಲ್ಲಿ ಜಾಗೃತಿ ಮೂಡಬೇಕು. ಅನ್ಯಾಯಕ್ಕೊಳಗಾದ ಪ್ರತಿಯೊಬ್ಬರೂ ಕಾನೂನು ಮೂಲಕ ಹೋರಾಟ ನಡೆಸಬೇಕು ಎಂದು ಸಲಹೆ ನೀಡಿದರು.
ಸಿವಿಲ್ ನ್ಯಾಯಾಧೀಶ ಬಿ.ವರದರಾಜು ಮಾತನಾಡಿ, ಮಹಿಳೆಯರಿಗೆ ಸಮಾಜದಲ್ಲಿ ವಿಶೇಷ ಗೌರವವಿದೆ. ಈ ಗೌರವಕ್ಕೆ ಚ್ಯುತಿ ಬಾರದಂತೆ ಎಚ್ಚರವಹಿಸಬೇಕು ಎಂದರು.
ಬರ್ಡ್ ಸಂಸ್ಥೆ ನಿರ್ದೇಶಕ ವೆಂಕಟೇಶ್ ಅವರು, ಪೋಕ್ಸೊ ಕಾಯಿದೆ ಕುರಿತು, ವಕೀಲ ಬಿ.ಅಪ್ಪಾಜಿಗೌಡ ಹಿಂದೂ ಕಾಯ್ದೆ ಕುರಿತು, ಮಹಿಳೆಯರ ಆಸ್ತಿ ಮತ್ತು ಹಕ್ಕುಗಳ ಕುರಿತು ಎನ್. ಪುಟ್ಟಸ್ವಾಮಿ ಮಾತನಾಡಿದರು. ವಕೀಲರ ಸಂಘದ ಉಪಾಧ್ಯಕ್ಷ ಎಚ್.ಸುರೇಶ್, ಕಾರ್ಯದರ್ಶಿ ಪುಟ್ಟಸ್ವಾಮಿ ಇದ್ದರು.