ಚಿಕ್ಕಬಳ್ಳಾಪುರ: 'ಬಿಜೆಪಿಯವರು ರಾಜ್ಯದಲ್ಲಿ ಯಾವ ಯಾತ್ರೆ ಮಾಡಿದರೂ ಜನ ಬದಲಾಗುವುದಿಲ್ಲ. ಬಿಜೆಪಿಯವರು ತಮ್ಮ ಅಧಿಕಾರ ಅವಧಿಯಲ್ಲಿ ತಾವೇ ಪರಿವರ್ತನೆಯಾದರು. ಹೀಗಾಗಿ ಜನ ಅವರ ವಿರುದ್ಧವಾಗಿದ್ದಾರೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.
ತಾಲ್ಲೂಕಿನ ಮಂಚನಬಲೆಯಲ್ಲಿ ಸೋಮವಾರ ಆಯೋಜಿಸಿದ್ದ ಬೀರೇಶ್ವರ, ಆನೆ ದೇವರು, ಚೌಡೇಶ್ವರಿ ಮತ್ತು ಸಿದ್ದೇ ದೇವರ ದೇವಾಲಯ ಉದ್ಘಾಟನಾ ಸಮಾರಂಭಕ್ಕೆ ಬಂದ ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
'ರಾಜ್ಯದಲ್ಲಿ ಮೋದಿ ಅಲೆ ಕೆಲಸ ಮಾಡುವುದಿಲ್ಲ. ಅವರು ಬಂದ ತಕ್ಷಣ ಜನರ ಮನೋಭಾವ ಬದಲಾಗುವುದಿಲ್ಲ. ಜನರ ಭಾವನೆ ಬದಲಿಸಲು ಅವರೇನು ಮಂತ್ರದಂಡ ಇಟ್ಟುಕೊಂಡಿದ್ದರಾ? ಇಲ್ಲಾ ಮ್ಯಾಜಿಕ್ ಮಾಡ್ತಾರಾ' ಎಂದರು.
'ಪಿ.ಜಿ.ಆರ್.ಸಿಂಧ್ಯಾ ಅವರು ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎಂಬುದು ಸುಳ್ಳು ಸುದ್ದಿ. ಸಿಂಧ್ಯಾ ಅವರಿಗೂ ವರುಣಾ ಕ್ಷೇತ್ರಕ್ಕೂ ಏನು ಸಂಬಂಧ? ಇದು ಹೇಗೆ ಸುದ್ದಿಯಾಗಿದೆಯೊ ಗೋತ್ತಿಲ್ಲಾ' ಎಂದರು.