ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ ಬೆಟ್ಟದಲ್ಲಿ... ಬೆಳದಿಂಗಳಲ್ಲಿ...

Last Updated 30 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಕಣ್ಣು ಹಾಯಿಸಿದಷ್ಟು ದೂರ ಹಚ್ಚ ಹಸಿರಿನ ಪೈರು, ಅಲ್ಲಲ್ಲಿ ಕಾಣುವ ಗುಬ್ಬಚ್ಚಿ, ಮಧ್ಯಾಹ್ನದ ಹೊತ್ತಿಗೆ ಬುತ್ತಿಗಂಟಿನಲ್ಲಿ ಮುದ್ದೆಯೋ, ಜೋಳದ ರೊಟ್ಟಿಯೋ ನೆಂಚಿಕೊಳ್ಳಲು ಕೆಂಡದಲ್ಲಿ ಸುಟ್ಟ ಹಸಿಮೆಣಸಿನಕಾಯಿ, ಜೊತೆಗೆ ಗಟ್ಟಿಯಾದ ಕೆನೆ ಮೊಸರು, ಸಂಜೆಯಾಗುತ್ತಲೇ ದನಕರುಗಳ ಕೊರಳಗೆಜ್ಜೆಯ ಕಲರವದೊಂದಿಗೆ ಮನೆಗೆ ವಾಪಸ್‌ ಹೋಗುವ ಸಂಭ್ರಮ, ರಾತ್ರಿ ಕುಟುಂಬದೊಂದಿಗೆ ಬೆಳದಿಂಗಳೂಟದ ಸಂತಸ...

ಇದೆಲ್ಲಾ ನಗರವಾಸಿಗಳಿಗೆ ಕನಸೇ ಸರಿ. ಆದರೆ, ಇಂಥದ್ದೊಂದು ಕನಸನ್ನು ನನಸು ಮಾಡಲು ಹೊರಟಿದೆ ಜಯನಗರ ಮೂರನೇ ಬ್ಲಾಕ್‌ನ ‘ಮಣ್ಮಯಿ’ ಸುಸ್ಥಿರ ಕೃಷಿ ಬಳಗ. ಚಾಮರಾಜನಗರ ಜಿಲ್ಲೆಯ ಬಿಳಿರಂಗನ ಬೆಟ್ಟದ ತಪ್ಪಲಲ್ಲಿರುವ ಅಮೃತಭೂಮಿಯಲ್ಲಿ ‘ಬೆಟ್ಟದ ತಪ್ಪಲಲ್ಲಿ ಒಂದು ದಿನ’ ಎನ್ನುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

‘ಬೆಂಗಳೂರಿನಂಥ ಮಹಾನಗರಗಳಲ್ಲಿ ಬದುಕುತ್ತಿರುವ ಬಹುಪಾಲು ಜನರು ಹಳ್ಳಿಯ ಮೂಲದವರಾಗಿದ್ದರೂ, ಕೆಲಸದ ಜಂಜಾಟದಲ್ಲಿ ಮೂಲ ಬೇರುಗಳನ್ನೇ ಮರೆಯುವಂತಾಗಿದೆ. ‘ಬೆಟ್ಟದ ತಪ್ಪಲಲ್ಲಿ ಒಂದು ದಿನ’ ನಗರದಲ್ಲಿರುವವರಿಗೆ ಮರಳಿ ಮಣ್ಣಿನ ಸಂವೇದನೆಯನ್ನು ಬೆಸೆಯುವ ಕಾರ್ಯಕ್ರಮ'  ಎನ್ನುತ್ತಾರೆ ಮಣ್ಮಯಿ ಕಾರ್ಯಕರ್ತ ನಾರಾಯಣ್.

80 ಎಕರೆ ವಿಸ್ತೀರ್ಣದ ಅಮೃತಭೂಮಿಯಲ್ಲಿ ನ.4ರ ಬೆಳಿಗ್ಗೆ ಆರಂಭವಾಗುವ ಕಾರ್ಯಕ್ರಮ ಸಂಜೆ 5ರವರೆಗೆ ನಡೆಯಲಿದೆ. ಬೆಳೆದು ನಿಂತಿರುವ ಸಿರಿಧಾನ್ಯಗಳು, ಹಣ್ಣು ಮತ್ತು ತರಕಾರಿಗಳನ್ನು ನೋಡುತ್ತಾ, ಕೆಸರುಗದ್ದೆಯಲ್ಲಿ ಆಟವಾಡಿ, ಬೆಳದಿಂಗಳಲ್ಲಿ ಹಬ್ಬದ ಊಟವನ್ನು ಸವಿಯಲು ಇದು ವೇದಿಕೆಯಾಗಲಿದೆ. ಇದಲ್ಲದೆ, ಟೆಂಟ್‍ಸಿನೆಮಾ, ಜಾನಪದ ಹಾಡು ಮತ್ತು ಕುಣಿತ, ಮಕ್ಕಳಿಗೆ ಅಜ್ಜಿ ಕತೆಗಳು, ಪಕ್ಷಿ ವೀಕ್ಷಣೆ, ದೇಸಿ ಹೈನುಗಾರಿಕೆ ಪ್ರಾತ್ಯಕ್ಷಿಕೆ, ಕೃಷಿ-ಆಹಾರ-ಪರಿಸರ ಸಂವಾದ, ತಮ್ಮ ಪ್ರೀತಿಪಾತ್ರರ ನೆನಪಿನಲ್ಲಿ ಅಥವಾ ಯಾವುದಾದರೂ ನೆಪದಲ್ಲಿ ಒಂದು ಗಿಡ ನೆಡುವ ಅಭಿಯಾನವನ್ನೂ ಕಾರ್ಯಕ್ರಮ ಒಳಗೊಂಡಿರುವುದು ವಿಶೇಷ ಎನಿಸಿದೆ.

ಮಣ್ಮಯಿ ಸುಸ್ಥಿರ ಕೃಷಿ ಬಳಗ ಎನ್ನುವುದು ಕೃಷಿಯಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಮುಂದಾಗಿರುವ ಯುವಜನರ ಗುಂಪು. ರಾಜ್ಯದ ವಿವಿಧ ಜಿಲ್ಲೆಗಳ ಯುವಕೃಷಿಕರು ಇದರ ಭಾಗ. ಕೃಷಿಯನ್ನು ಬೆಂಬಲಿಸುವ ಕೃಷಿಯೇತರ ಸಮುದಾಯದವರೂ, ಅರೆಕೃಷಿಕರೂ ಕೂಡ ಇದರ ಒಡನಾಡಿಗಳು.

ಮಾಹಿತಿಗೆ ಮೊ- 96111 05029, 97437 31223

***

ಮಗಳಿಗೆ ಕೃಷಿ ಪರಿಚಯಿಸುವ ಆಸೆ
ಕಳೆದ ಬಾರಿ ರಾಮನಗರದಲ್ಲಿ ನಡೆದಿದ್ದ ಮಾವಿನ ಮೇಳಕ್ಕೆ ಮಗಳನ್ನು ಕರೆದುಕೊಂಡು ಹೋಗಿದ್ದೆ. ಅಲ್ಲಿ ಮೊದಲ ಬಾರಿಗೆ ನನ್ನ ಮಗಳು ಶ್ರೀಯಾ, ರಾಗಿಗಂಜಿ ಕುಡಿದಳು. ಗ್ರಾಮೀಣ ಕ್ರೀಡೆಗಳಲ್ಲಿ ಪಾಲ್ಗೊಂಡು, ಮಾವಿನಹಣ್ಣು ಕಿತ್ತು ತಿಂದಳು. ಅಂದು ಅವಳ ಸಂಭ್ರಮಕ್ಕೆ ಎಣೆಯೇ ಇರಲಿಲ್ಲ. ಈ ಬಾರಿ 'ಬೆಟ್ಟದ ತಪ್ಪಲಲ್ಲಿ ಒಂದು ದಿನ' ಕಾರ್ಯಕ್ರಮಕ್ಕೆ ಮಗಳು ಮತ್ತು ಪತ್ನಿ ಪದ್ಮಮಾಲಿನಿಯೊಂದಿಗೆ ಹೋಗುತ್ತಿದ್ದೇನೆ. ಮಗಳಿಗೆ ಕೃಷಿ ಬಗ್ಗೆಯೂ ಪರಿಚಯ ಮಾಡಿಕೊಡುವ ಆಸೆ ನನ್ನದು.

–ಬದರಿನಾಥ್ ಅಸೋಡು ಕೃಷ್ಣರಾಜ್, ಕಾರ್ಯನಿರ್ವಾಹಕ ನಿರ್ದೇಶಕ, ಅಜುಗ ಕಂಪೆನಿ, ಯಮಲೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT