ಬಾರಾಬಂಕಿ: ಪೊಲೀಸರ ತಪ್ಪು ಗ್ರಹಿಕೆ ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ಎಂಟು ತಿಂಗಳ ತುಂಬು ಗರ್ಭಿಣಿಯೊಬ್ಬರನ್ನು ಬಲಿ ಪಡೆದಿದೆ.
ಮನ್ಪುರ ಗ್ರಾಮದ ಮನೆಗಳಲ್ಲಿ ಅಕ್ರಮ ಮದ್ಯ ಸಂಗ್ರಹಿಸಲಾಗಿದೆ ಎಂಬ ಸುಳಿವಿನ ಮೇರೆಗೆ ಪೊಲೀಸರು ಭಾನುವಾರ ರಾತ್ರಿ ಕೆಲವು ಮನೆಗಳ ಮೇಲೆ ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಮನೆಯಿಂದ ಹೊರ ಓಡಿಬಂದ ಗರ್ಭಿಣಿಯನ್ನು ಕಂಡ ಪೊಲೀಸರು ಹೊಟ್ಟೆಯ ಭಾಗದಲ್ಲಿ ಮದ್ಯದ ಚೀಲ ಅಡಗಿಸಿಕೊಟ್ಟುಕೊಂಡು ಪರಾರಿಯಾಗುತ್ತಿದ್ದಾರೆ ಎಂದು ತಪ್ಪಾಗಿ ಭಾವಿಸಿ ಬೆನ್ನಟ್ಟಿದರು.
ಪೊಲೀಸರು ಜೋರಾಗಿ ತಳ್ಳಿದ್ದರಿಂದ ರುಚಿ ರಾವತ್ (22) ಎಂಬ ಮಹಿಳೆ ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮಸ್ಥರ ಆರೋಪವನ್ನು ತಳ್ಳಿ ಹಾಕಿರುವ ಪೊಲೀಸರು, ಮಹಿಳೆ ಮನೆ ಮೇಲೆ ದಾಳಿ ನಡೆಸಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ. ಮೃತ ಮಹಿಳೆಯ ಕುಟುಂಬ ಸದಸ್ಯರು ಈ ಬಗ್ಗೆ ದೂರು ನೀಡಿಲ್ಲ.
‘ಪೊಲೀಸರು ದಾಳಿ ನಡೆಸಿರುವುದು ನಿಜ. ಮಹಿಳೆ ಸಾವಿಗೆ ಪೊಲೀಸರು ಕಾರಣ ಎಂಬ ಗ್ರಾಮಸ್ಥರ ಆರೋಪ ಕುರಿತು ತನಿಖೆಗೆ ಆದೇಶಿಸಲಾಗಿದೆ. ಆರೋಪ ಸಾಬೀತಾದರೆ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭರವಸೆ ನೀಡಿದ್ದಾರೆ.