ಚನ್ನಮ್ಮನ ಕಿತ್ತೂರು: 62ನೇ ರಾಜ್ಯೋತ್ಸವ ಪ್ರಯುಕ್ತ ಪಟ್ಟಣದಲ್ಲಿ ವಿವಿಧ ಶಾಲೆಗಳ ಮಕ್ಕಳ ರೂಪಕಗಳು ಬುಧವಾರ ನಡೆದ ಭುವನೇಶ್ವರಿ ದೇವಿ ಆಳೆತ್ತರದ ಭಾವಚಿತ್ರದ ಮೆರವಣಿಗೆ ಆಕರ್ಷಕವಾಗಿ ನಡೆದವು.
ರಾಷ್ಟ್ರೀಯ ಹೆದ್ದಾರಿ ಪಕ್ಕದ ಆಶ್ವಾರೂಢ ಚನ್ನಮ್ಮ ಪ್ರತಿಮೆಗೆ ಗಣ್ಯರು ಮಾಲಾರ್ಪಣೆ ಮಾಡಿದ ನಂತರ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಮಹಮ್ಮದ ಹನೀಫ್ ಸುತಗಟ್ಟಿ ಮೆರವಣಿಗೆಗೆ ಚಾಲನೆ ನೀಡಿದರು.
ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿಗಳ ಛದ್ಮವೇಷ, ಸಂಗೊಳ್ಳಿ ರಾಯಣ್ಣ ರೂಪಕ, ಯುವಕರು ಕನ್ನಡದ ಹಾಡಿಗೆ ಹಾಕಿದ ಹೆಜ್ಜೆ, ಕನ್ನಡ ಧ್ವಜ ಹಿಡಿದು ಕನ್ನಡಪರ ಘೋಷಣೆ ಕೂಗುತ್ತ ಸಾಗಿದ ವಿವಿಧ ಶಾಲೆಗಳ ವಿದ್ಯಾರ್ಥಿಗಳ ಪ್ರಭಾತ ಪೇರಿಯನ್ನು ಸಾರ್ವಜನಿಕರು ಬೀದಿಬದಿಗೆ ನಿಂತು ನೋಡಿ ಖುಷಿಪಟ್ಟರು.
ಪ್ರಮುಖ ಬೀದಿಯಲ್ಲಿ ಸಾಗಿದ ಮೆರವಣಿಗೆ ಪಟ್ಟಣ ಪಂಚಾಯ್ತಿಗೆ ಆಗಮಿಸಿ ಮುಕ್ತಾಯಗೊಂಡಿತು.
ಉಪಾಧ್ಯಕ್ಷ ಕಿರಣ ವಾಳದ, ತಹಶೀಲ್ದಾರ್ ಪ್ರವೀಣ ಹುಚ್ಚಣ್ಣವರ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಐ. ಕೆ. ಗುಡದಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಎ. ಬಿ. ಅಡಕಿ, ಪೊಲೀಸ್ ವೃತ್ತ ನಿರೀಕ್ಷಕ ರಾಘವೇಂದ್ರ ಹವಾಲ್ದಾರ್, ಉಪನಿರೀಕ್ಷಕ ಮಲ್ಲಿಕಾರ್ಜುನ ಕುಲಕರ್ಣಿ ಅನೇಕರು ಭಾಗವಹಿಸಿದ್ದರು.