ನಾಯಿಯೊಂದು ಸಿನಿಮಾದಲ್ಲಿ ಅಭಿನಯಿಸುವಂತೆ ಮಾಡಿ, ಸಸ್ಪೆನ್ಸ್ ಥ್ರಿಲ್ಲರ್ ಕಥೆಯೊಂದನ್ನು ಹೇಳುವ ಸಿನಿಮಾ ‘ನಿಶ್ಯಬ್ದ–2’. ಈ ಸಿನಿಮಾಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು (ಸಿಬಿಎಫ್ಸಿ) ಯು/ಎ ಪ್ರಮಾಣಪತ್ರ ನೀಡಿದೆ.
ಸಿನಿಮಾ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ ಸುದ್ದಿಗೋಷ್ಠಿ ಆಯೋಜಿಸಿತ್ತು. ‘ಒಳ್ಳೆಯ ಸಿನಿಮಾವೊಂದನ್ನು ಮಾಡಿ ನಾವು ನಮ್ಮ ಕೆಲಸ ಪೂರ್ಣಗೊಳಿಸಿದ್ದೇವೆ. ಇನ್ನು ಮುಂದಿನ ಕೆಲಸ ವೀಕ್ಷಕರಿಗೆ ಬಿಟ್ಟಿದ್ದು’ ಎಂದರು ನಾಯಕ ರೂಪ್ ಶೆಟ್ಟಿ.
ತರಬೇತಿ ಪಡೆದ ನಾಯಿಯೊಂದನ್ನು ಸಿನಿಮಾ ತಂಡ ಪ್ರಮುಖ ಪಾತ್ರವನ್ನಾಗಿ ಬಳಸಿಕೊಂಡಿದೆ. ಈ ನಾಯಿ ಸಿನಿಮಾದ ಮುಖ್ಯ ಆಕರ್ಷಣೆಗಳಲ್ಲಿ ಒಂದು ಎಂದು ತಂಡ ಹೇಳಿದೆ. ‘ಈ ಸಿನಿಮಾದಲ್ಲಿ ಸಾಹಸ ಸನ್ನಿವೇಶಗಳು ಹಲವಾರಿವೆ’ ಎನ್ನುತ್ತಾರೆ ನಿರ್ದೇಶಕ ದೇವರಾಜ್ ಕುಮಾರ್.
ತಾರಾನಾಥ ಶೆಟ್ಟಿ ಬೋಳಾರ್ ಇದರ ನಿರ್ಮಾಪಕರು. ‘ಮಂಗಳೂರಿನವರು ಹೆಚ್ಚಾಗಿ ತುಳು ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ. ನಾನು ಯಾಕೆ ಕನ್ನಡ ಸಿನಿಮಾ ಮಾಡಬಾರದು ಎಂದು ಅನಿಸಿತು. ಹಾಗಾಗಿಯೇ ಈ ಸಿನಿಮಾ ನಿರ್ಮಾಣಕ್ಕೆ ಕೈಹಾಕಿದೆ’ ಎಂದರು ತಾರಾನಾಥ ಶೆಟ್ಟಿ. ⇒v