ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗಾಲದಲ್ಲಿ ಜವರಾಯನ ನೆರಳು

Last Updated 3 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಹೃದಯಾಘಾತ ಎಂದರೆ ಹೃದಯದ ಪಂಪಿನಿಂದ ರಕ್ತಸಂಚಾರ ಏಕಾಏಕಿ ನಿಂತು ಬಿಡುವುದು. ಇದು ಲಘುಸ್ವರೂಪದ್ದಾದರೆ ರೋಗಿಯ ಚೇತರಿಕೆ ಸಾಧ್ಯ; ಬಲವಾದದ್ದಾದರೆ ಸಾವು ಖಚಿತ. ಹೃದಯವೆಂಬ ಯಂತ್ರ ಒಂದು ಸಜೀವ ಅವಯವ. ಅದರ ಹೊರೆಮೈಯ ರಕ್ತನಾಳಗಳಲ್ಲಿ ಅಡ್ಡಿ ಆತಂಕ ಒದಗುವುದರಿಂದ ಒಂದು ಭಾಗದ ಕಾರ್ಯಕ್ಷಮತೆ ಕುಸಿದು ಇಡೀ ಯಂತ್ರವೇ ದುಃಸ್ಥಿತಿಗೆ ತಲುಪುತ್ತದೆ.

ಹೆಚ್ಚಿನ ಹೃದಯಾಘಾತಗಳು ಚಳಿಗಾಲದಲ್ಲಿ, ಅದೂ ನಸುಕಿನಲ್ಲಿ ಆಗುತ್ತತದೆ. ಚಳಿಗಾಲದ ರಾತ್ರಿಗಳಲ್ಲಿ ತಾಪಮಾನ ತುಂಬ ಕಡಿಮೆಯಾಗುವುದರಿಂದ ಅಪಧಮನಿಗಳು ಪೆಡುಸಾಗುತ್ತವೆ. ರಕ್ತದೊತ್ತಡ ಹಾಗೂ ಪ್ರೊಟೀನ್‌ಗಳ ಪ್ರಮಾಣ ಏರುತ್ತದೆ. ಇವೆಲ್ಲವುಗಳ ಕ್ರೋಡೀಕೃತ ಪರಿಣಾಮವಾಗಿ ರಕ್ತಹೆಪ್ಪುಗಟ್ಟುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಹಾಗೆಯೇ ಈ ಅವಧಿಯಲ್ಲಿ ವೈರಲ್ ಸೋಂಕುಗಳೂ ಹೆಚ್ಚಿನ ಪ್ರಮಾಣದಲ್ಲಿ ಹರಡುವುದರಿಂದಾಗಿ, ಉಸಿರಾಟ ಹಾಗೂ ಶ್ವಾಸಕೋಶದ ತೊಂದರೆಗಳುಂಟಾಗಿ ಹೃದಯದ ಸಮಸ್ಯೆಗಳು ಉಲ್ಬಣಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಇವೆಲ್ಲವುಗಳಿಂದಾಗಿ ರಕ್ತಸಂಚಾರಕ್ಕೆ ಅಡ್ಡಿ–ಆತಂಕಗಳು ಉಂಟಾಗಿ ಹೃದಯಕ್ಕೆ ಸಾಕಷ್ಟು ಆಮ್ಲಜನಕ ದೊರೆಯದೇ ಹೃದಯಾಘಾತವಾಗುತ್ತದೆ. ಚಳಿಗಾಲದಲ್ಲಿ ಹೆಚ್ಚಿನ ಪ್ರಮಾಣದ ಸಿಂಥೇಜಿಕ್ ಡಿಸ್ಟಾರ್ಜ್‌, ಅಂದರೆ ಅಡ್ರಿನಾಲಿನ್ ಪಂಪಿಂಗ್ ಹೆಚ್ಚಾಗಿರುತ್ತದೆ. ಇದರಿಂದಾಗಿ ಹೃದಯದ ಮೇಲೆ ಹೆಚ್ಚಿನ ಒತ್ತಡ ಉಂಟಾಗಿ ಅದು ಹೆಚ್ಚು ಕಠಿಣವಾಗಿ ಕೆಲಸದಲ್ಲಿ ತೊಡಗುವಂತಾಗುತ್ತದೆ. ಹೃದಯಾಘಾತ ಸಂಭವಿಸುವ ಸಾಧ್ಯತೆಯುಳ್ಳ ಅಥವಾ ಈಗಾಗಲೇ ಹೃದಯಸಂಬಂಧಿ ತೊಂದರೆಗಳಿಂದ ಬಳಲುತ್ತಿರುವವರಲ್ಲಿ ಹೃದಯಾಘಾತದ ಪ್ರಮಾಣ ಇನ್ನೂ ಹೆಚ್ಚು. ಜೊತೆಗೆ ಚಳಿಗಾಲದಲ್ಲಿ ಸಂಭವಿಸುವ ಹೃದಯಾಘಾತ ಹೆಚ್ಚು ಗಂಭೀರ ಸ್ವರೂಪದ್ದಾಗಿರುತ್ತದೆ.

ಚಳಿಗಾಲದ ದಿನಗಳಲ್ಲಿ ಕೊಬ್ಬರಿ ಎಣ್ಣೆ ಗಟ್ಟಿಯಾಗುವುದನ್ನು ಗಮನಿಸಿದ್ದೀರಿ. ರಕ್ತದ ತರಲತೆ ಕಡಿಮೆಯಾಗಿ ಕೊಬ್ಬು ಅಧಿಕವಿದ್ದರೆ ಇಂಥ ಅಪಾಯ ದೇಹದೊಳಗೂ ಸಂಭವಿಸಬಹುದು. ಬೇಸಿಗೆಗೂ ಚಳಿಗಾಲಕ್ಕೂ ಈ ವ್ಯತ್ಯಾಸ ಗಮನಾರ್ಹ. ಹೃದಯದ ಹೊರಗೆ ಗೋಡೆಗಳಲ್ಲಿ ಸೂಕ್ಷ್ಮತಿಸೂಕ್ಷ್ಮ ಕಿರುನಾಳಗಳಲ್ಲಿ ರಕ್ತಪ್ರವಾಹ ನಿರಂತರತೆಯು ಹೃದಯ ಆರೋಗ್ಯಕ್ಕೆ ಪೂರಕ. ಚಳಿಯ ದಿನಗಳಲ್ಲಿ ಇಂತಹ ಹರಿಯುವಿಕೆಗೆ ಕಡಿವಾಣವಿರುವುದೆಂದು ಹಾರ್ವರ್ಡ್‌ ವೈದ್ಯಕೀಯ ಮಹಾವಿದ್ಯಾಲಯದ ತಜ್ಞ ಥಾಮಸ್ ಲೇಲೆ ಅಭಿಪ್ರಾಯ.

ಕಿರುನಾಳಗಳ ಒಳಪದರ ಕಿರಿದಾಗಿದ್ದರೆ, ಕೊಬ್ಬಿನ ಕರಣೆ ಕಟ್ಟಿದರಂತೂ ಸಂಚಾರ ಕಠಿಣವಾಗುತ್ತದೆ. ಆಗಲೂ ಹೃದಯಾಘಾತ ಕಟ್ಟಿಟ್ಟ ಬುತ್ತಿ. ‘30, 20, 40 ಶೇಕಡಾಂಶದಷ್ಟು ಮುಚ್ಚಿದ ಹಾದಿ’ – ಎಂದೆಲ್ಲಾ ವೈದ್ಯರ ಪರಿಭಾಷೆ ಬಗ್ಗೆ ಕೇಳಿರಬಹುದು. ಒಬ್ಬ ರೋಗಿಗೆ ಶೇ.30 ಅಂಶ ಮಾರ್ಗ ಕಿರಿದಾಗಿದೆ ಎಂದರೆ, ಉಳಿದ ದಿನಗಳಂತಲ್ಲ. ಚಳಿಯಲ್ಲಿ ಅದು ಶೇ.70ಕ್ಕೆ ಸಮ ಎಂದರೆ ಸಮಸ್ಯೆ ಎಷ್ಟು ವಿಕೋಪಕ್ಕೆ ತಲುಪಿರುತ್ತದೆ! ರಕ್ತನಾಳಗಳ ಒಳಪರೆ ಹೊರಸೂಸುವ ನೈಟ್ರಿಕ್ ಆಕ್ಸೈಡ್‌ನಿಂದ ಮಾರ್ಗ ಸಲೀಸಾಗುತ್ತದೆ. ರಕ್ತಸಂಚಾರ ಸುಗಮ; ಆದರೆ ಪೆಡಸಾದ, ಕೊಬ್ಬಿನ ಕರಣೆ ತುಂಬಿದ ರಕ್ತನಾಳಗಳಲ್ಲಿ ಇಂಥ ಪ್ರಕ್ರಿಯೆ ಜರಗುವುದೇ ಇಲ್ಲ.

ಹೃದಯಾಘಾತ ಸಂಭವಿಸಿದ ಕ್ಷಣಗಳಲ್ಲಿ ಹೃದಯದ ಬಡಿತದ ಮೇಲೆ ವಾತಾವರಣದಲ್ಲಿ ಆಗುವ ಏರುಪೇರುಗಳು ಕೂಡ ಪ್ರಭಾವವನ್ನು ಬೀರುತ್ತದೆ ಎಂಬ ಅಂಶವು ಲಂಡನ್ ಟೆಷ್ಟ್‌ ಹಾಸ್ಪಿಟಲ್‌ದಲ್ಲಿ ನಡೆಸಲಾದ ವಿಶ್ಲೇಷಣೆಯಿಂದ ತಿಳಿದು ಬಂದ ಸಂಗತಿ. ಚಳಿಗಾಲದಲ್ಲಿಯ ವಾತಾವರಣದ ಉಷ್ಣತೆ ಹಾಗೂ ಆರ್ದ್ರತೆ ಕೂಡ ತೀವ್ರ ಹೃದಯಾಘಾತ ಸಂಭವಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಇಂಟರ್‌ನ್ಯಾಶನಲ್ ಜರ್ನಲ್ ಆಫ್ ಕಾರ್ಡಿಯಾಲಾಜಿ ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನದ ವರದಿಯು ಹೇಳುತ್ತದೆ.

ಬೆಚ್ಚಿ ಬೀಳಿಸುವ ಅಚ್ಚರಿಯ ವಿಷಯವನ್ನು ಇತ್ತೀಚೆಗೆ ವಿಜ್ಞಾನಿಗಳು ಬಹಿರಂಗ ಪಡಿಸಿದ್ದಾರೆ. ಅದೆಂದರೆ ಡಿ ಜೀವಸತ್ವದ ಕೊರತೆಯೂ ಹೃದಯಾಘಾತವನ್ನುಂಟು ಮಾಡಬಲ್ಲದಂತೆ! ನಮಗೆಲ್ಲ ಗೊತ್ತಿರುವಂತೆ ಸೂರ್ಯಕಿರಣಗಳು ಡಿ ಜೀವಸತ್ವದ ಭಂಡಾರ. ಚಳಿಗಾಲದಲ್ಲಿ ಮನೆಯೊಳಗೆ ಇರಲು ಇಷ್ಟಪಡುವುದರಿಂದ, ಸೂರ್ಯಕಿರಣಕ್ಕೆ ಮೈಯೊಡ್ಡುವ ಪ್ರಮಾಣ ಕುಗ್ಗಿ, ಡಿ ಜೀವಸತ್ವದ ಉತ್ಪಾದನೆಯು ಕಡಿಮೆಯಾಗುತ್ತದೆ.

ವಿಜ್ಞಾನಿಗಳು ಹೊರಗೆಡವಿದ ಇನ್ನೊಂದು ಆಸಕ್ತಿದಾಯಕ ವಿಷಯವೆಂದರೆ, ಎತ್ತರ ಪ್ರದೇಶಗಳಲ್ಲಿ ವಾಸಿಸುವವರಿಗೆ ಹೃದಯಾಘಾತದ ಅಪಾಯ ಕಡಿಮೆ. ಏಕೆಂದರೆ ಎತ್ತರಕ್ಕೆ ಹೋದಂತೆ ಸೂರ್ಯಕಿರಣಗಳಲ್ಲಿ ಅಲ್ಟ್ರಾ ವೈಲೆಟ್‌ ಪ್ರಮಾಣ ಹೆಚ್ಚಿ ಡಿ ಜೀವಸತ್ವದ ಉತ್ಪಾದನಾ ಪ್ರಮಾಣವೂ ಹೆಚ್ಚಿರುತ್ತದೆ. ಆದ್ದರಿಂದಲೇ ಏನೋ ರಕ್ತದೊತ್ತಡ ಇಲ್ಲದವರಿಗೂ, ಕೊಲೆಸ್ಟ್ರಾಲ್‌ ಕಡಿಮೆ ಇರುವ ಕೆಳ ಪ್ರದೇಶದಲ್ಲಿ ವಾಸಿಸುವ ಜನರಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚು.

ಚಳಿಗಾಲವು ಆಲಸ್ಯರ ಸ್ವರ್ಗವೇ ಸರಿ! ಮಧುಮೇಹರೋಗವು ಈ ಕಾಲದಲ್ಲಿ ಉಲ್ಬಣಿಸುತ್ತದೆ. ಸ್ಥೂಲಕಾಯಗಳನ್ನು ಕಂಡರೆ ಹೃದಯಾಘಾತಕ್ಕೆ ಎಲ್ಲಿಲ್ಲದ ಪ್ರೀತಿ. ಚಳಿಗಾಲದಲ್ಲಿ ಸಾಮಾನ್ಯವಾಗಿ ಹಸಿವು ಹೆಚ್ಚಾಗುತ್ತದೆ. ವೈರಸ್‌ಗಳೂ ಈ ಕಾಲದಲ್ಲಿಯೇ ಹೆಚ್ಚು ಕ್ರಿಯಾಶೀಲವಾಗುತ್ತದೆ. ಜನ ಮನೆಯೊಳಗೆ ಇರಲು ಇಷ್ಟಪಡುವುದರಿಂದ ಜನರ ದೈಹಿಕ ಕಸರತ್ತು ಕಡಿಮೆಯಾಗಿ ವೈರಸ್‌ಗಳು ವೃದ್ಧಿಯಾಗಿ ಸೋಂಕಿತ ಚಳವಳಿ ನೀಡುತ್ತವೆ. ಈ ಕಾಲದಲ್ಲಿ ಎಣೆಯಲ್ಲಿ ಕರಿದ ಕುರುಕಲು ಆಹಾರ ಪದಾರ್ಥಗಳನ್ನು ಹೆಚ್ಚು ತಿನ್ನುವುದು, ವ್ಯಾಯಾಮವಿಲ್ಲದಿರುವುದು, ಸೂರ್ಯನ ಎಳೆ ಬಿಸಿಲಿಗೆ ಮೈಯೊಡ್ಡುವುದರ ಪ್ರಯುಕ್ತ ಡಿ ಜೀವಸತ್ವದ ಕೊರತೆ –  ಹೀಗೆ ಈ ಚತುರ್ವಿಧ ಶತ್ರುಗಳನ್ನೂ ದೇಹದೊಳಗೆ ಆಮಂತ್ರಿಸಿದಾಗ, ಐದನೆಯವ ಜವರಾಯ ಹೃದಯಾಘಾತದ ರೂಪದಲ್ಲಿ ಆಮಂತ್ರಣವಿಲ್ಲದೆ ಬಂದೆರಗುತ್ತಾನೆ.

ಮುನ್ನೆಚ್ಚರಿಕೆ ಕ್ರಮಗಳು

* ತೀರಾ ನಸುಕಿನಲ್ಲಿ ವಾಕಿಂಗ್‌ಗೆ ಹೋಗಬೇಡಿ. ಹಾಗೆಂದು ಸುಮ್ಮನೆ ಮಲಗಬೇಡಿ. ಚಳಿಗಾಲದಲ್ಲಿ ಕ್ರಿಯಾಶೀಲ ಶಿಸ್ತಿನ ಬದುಕು ನಿಮ್ಮದಾಗಲಿ.

* ಬೆಚ್ಚಗಿನ ಬಟ್ಟೆಗಳನ್ನು ಧರಿಸಲು ಮರೆಯಬೇಡಿ. ಮಧುಮೇಹ ಮತ್ತು ರಕ್ತದ ಏರೊತ್ತಡವನ್ನು ನಿಯಂತ್ರಣದಲ್ಲಿಡಿ

* ಶ್ವಾಸಕೋಶದ ಸೋಂಕುಗಳಿಗೆ ಸಕಾಲದಲ್ಲಿ ಸರಿಯಾದ ಚಿಕಿತ್ಸೆಯನ್ನು ತಜ್ಞವೈದ್ಯರ ಸಲಹೆಯಂತೆ ಪಡೆದುಕೊಳ್ಳಬೇಕು.

* ಅತಿ ಹೆಚ್ಚಿನ ಬಳಲಿಕೆ, ಉಸಿರಾಡಲು ಸಾಧ್ಯವಾಗದೇ ಇರುವುದು, ಎದೆಯುರಿ ಮುಂತಾದ ಲಕ್ಷಣಗಳ ಬಗ್ಗೆ ಎಚ್ಚರಿಕೆ ವಹಿಸಬೇಕು.

* ಲಘು ಆಹಾರ ಸೇವಿಸಿ, ಕೊಬ್ಬು, ಮದ್ಯ–ಧೂಮಪಾನಗಳಿಂದ ದೂರವಿರಿ.

* ವೈದ್ಯರ ಸಕಾಲಿಕ ಭೇಟಿ, ಸಮಾಲೋಚನೆಯ ಅಭ್ಯಾಸವನ್ನು ರೂಢಿಸಿಕೊಳ್ಳಿ.

* ತೂಕದ ಬಗ್ಗೆ ನಿಗಾ ಇರಲಿ. ಹಬ್ಬದ

* ಸಾಲಿನ ಸಿಹಿ ಸೇವನೆ ಮಿತಿಯಾಗಿರಲಿ.

* ಶುದ್ದ ಹವೆಯಿರುವ ಮತ್ತು ತರೆದ ಕೋಣೆಯಲ್ಲಿನ ನಿದ್ರೆ ಉತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT