ಅಹಮದಾಬಾದ್: ಕೇಂದ್ರ ಸರ್ಕಾರ ಕಳೆದ ವರ್ಷ ಕೈಗೊಂಡಿದ್ದ ನೋಟು ರದ್ದು ನಿರ್ಧಾರ ಅಜಾಕರೂಕ ನಡೆ ಎಂದು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಹೇಳಿದರು.
ಉದ್ಯಮಿಗಳು ಮತ್ತು ವಹಿವಾಟುದಾರರ ಜತೆ ‘ಆರ್ಥಿಕತೆಯ ಪ್ರಸಕ್ತ ಸ್ಥಿತಿಗತಿ’ ವಿಷಯದ ಬಗ್ಗೆ ಇಲ್ಲಿ ಸಂವಾದ ನಡೆಸಿದ ಅವರು, ನೋಟು ರದ್ದತಿಯು ಸಂಘಟಿತ ಮತ್ತು ಕಾನೂನಾತ್ಮಕ ಲೂಟಿ ಎಂದು ಟೀಕಿಸಿದರು.
‘ನೋಟು ರದ್ದತಿಯ ಯಾವೊಂದು ಉದ್ದೇಶವೂ ಈವರೆಗೆ ಈಡೇರಿಲ್ಲ. ಜಿಎಸ್ಟಿಯು ಸಣ್ಣ ಉದ್ದಿಮೆದಾರರಿಗೆ ದುಸ್ವಪ್ನವಾಗಿ ಪರಿಣಮಿಸಿದೆ’ ಎಂದು ಹೇಳಿದರು.
ಅಹಮದಾಬಾದ್–ಮುಂಬೈ ನಡುವಣ ಬುಲೆಟ್ ರೈಲು ಯೋಜನೆಯನ್ನೂ ಟೀಕಿಸಿದ ಅವರು, ಇದೊಂದು ಜಂಭದ ಕೆಲಸ ಎಂದರು.
ಕೇಂದ್ರ ಸರ್ಕಾರವು ನೋಟು ರದ್ದು ನಿರ್ಧಾರ ಪ್ರಕಟಿಸಿ ನಾಳೆಗೆ (ನವೆಂಬರ್ 8) ಒಂದು ವರ್ಷವಾಗಲಿದೆ. ಈ ಹಿನ್ನೆಲೆಯಲ್ಲಿ ಬುಧವಾರ ‘ಕರಾಳ ದಿನ’ ಆಚರಿಸಲು ಪ್ರತಿಪಕ್ಷಗಳು ನಿರ್ಧರಿಸಿವೆ. ಈ ಸಂದರ್ಭ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಸೂರತ್ಗೆ ಭೇಟಿ ನೀಡುವ ನಿರೀಕ್ಷೆ ಇದೆ.