ಬೆಂಗಳೂರು: ‘11 ವರ್ಷಕ್ಕೆ ನನ್ನ ಮದುವೆಯಾಯಿತು. ನಾಲ್ಕು ವರ್ಷ ಬಿಟ್ಟು ಗಂಡನ ಮನೆಗೆ ಹೋದೆ. ಇನಿಯನ ಕುರಿತು ಕನಸು ಕಾಣಲೂ ಬದುಕು ಅವಕಾಶ ಮಾಡಿಕೊಡಲಿಲ್ಲವಲ್ಲ ಎಂದು ಕತ್ತಲೆಯಲ್ಲಿ ಇಟ್ಟ ಕಣ್ಣೀರುಗಳೇ ಕವಿತೆಗಳಾಗಿವೆ’ ಎಂದು ಲೇಖಕಿ ನಿರ್ಮಲಾ ಎಂ. ಅಂಗಡಿ ತಿಳಿಸಿದರು.
ಹೆಸರಘಟ್ಟ ಹೋಬಳಿಯ ತರಬನಹಳ್ಳಿಯಲ್ಲಿ ಒಡನಾಟ ಸಂಸ್ಥೆ ಹಮ್ಮಿಕೊಂಡಿದ್ದ ‘ಬೆಳಕು ಕಂಡ ಬದುಕು’ ಕವನ ಸಂಕಲನ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಕವಿತೆ ರೂಪಗೊಂಡ ಬಗೆಯನ್ನು ವಿವರಿಸಿದರು.
‘ನನ್ನಮ್ಮ ಮನೆಗೆಲಸ ಮಾಡಿ ನನ್ನನ್ನು ಸಾಕಿದಳು. ಸಾಕಷ್ಟು ದಿನಗಳನ್ನು ಹಸಿದ ಹೊಟ್ಟೆಯಲ್ಲಿಯೇ ಕಳೆದಿದ್ದೇವೆ. ಜವಾಬ್ದಾರಿ ಕಳೆದುಕೊಳ್ಳಲು ಚಿಕ್ಕವಳಿದ್ದಾಗಲೇ ಅಮ್ಮ ನನ್ನ ಮದುವೆ ಮಾಡಿದಳು. ಮದುವೆಯಾದವನೂ ತನ್ನ ಜವಾಬ್ದಾರಿಯನ್ನು ಮರೆತು ನಡೆದುಕೊಂಡ’ ಎಂದು ತಮ್ಮ ನೋವಿನ ಕಥೆಯನ್ನು ಬಿಚ್ಚಿಟ್ಟರು.
‘ಅನ್ಯಾಯವನ್ನು ದಿಟ್ಟತನದಿಂದ ಎದುರಿಸುವ ಧೈರ್ಯ ಹೆಣ್ಣಿನಲ್ಲಿ ಎಲ್ಲಿತನಕ ಬರುವುದಿಲ್ಲವೋ ಅಲ್ಲಿಯವರೆಗೆ ಶೋಷಣೆ ನಿಲ್ಲುವುದಿಲ್ಲ’ ಎಂದು ಶಾಸಕ ವಿಶ್ವನಾಥ್ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.
‘ಜಾಗತೀಕರಣದ ಸಂದರ್ಭದಲ್ಲೂ ಹೆಣ್ಣು ಪರಿಸ್ಥಿತಿಗಳಿಗೆ ಸೋತು ರಾಜಿಯಾಗುವ ವಿಭಿನ್ನ ವಸ್ತುಗಳನ್ನು ಈ ಕವನ ಸಂಕಲನ ಅಭಿವ್ಯಕ್ತಿಸುತ್ತದೆ’ ಎಂದು ಹೇಳಿದರು.