ಹೈದರಾಬಾದ್: ಹೊಸ ರಾಜಧಾನಿ ಅಮರಾವತಿಯಲ್ಲಿ ₹210 ಕೋಟಿ ವೆಚ್ಚದಲ್ಲಿ 125 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಶುಕ್ರವಾರ ತಿಳಿಸಿದರು.
ಡಿಸೆಂಬರ್ನಲ್ಲಿ ಕಾಮಗಾರಿ ಆರಂಭವಾಗಲಿದ್ದು, 18 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು. ಪ್ರೇಕ್ಷಣೀಯ ಸ್ಥಳವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಅಂಬೇಡ್ಕರ್ ಸ್ಮಾರಕ ಉದ್ಯಾನಕ್ಕೆ 2016ರಲ್ಲಿ ನಾಯ್ಡು ಅಡಿಗಲ್ಲು ಹಾಕಿದ್ದರು.
15 ಎಕರೆ ಜಾಗದಲ್ಲಿ ಪ್ರತಿಮೆ ನಿರ್ಮಾಣವಾಗಲಿದ್ದು, ಇಲ್ಲಿ ಸಭಾಂಗಣ, ಬೌದ್ಧ ಧ್ಯಾನಕೇಂದ್ರ, ವಸ್ತು ಸಂಗ್ರಹಾಲಯ ಹಾಗೂ ಅಂಬೇಡ್ಕರ್ ಜೀವನ ತಿಳಿಸುವ ಗ್ರಂಥಾಲಯ ನಿರ್ಮಾಣವಾಗಲಿದೆ.
ಆಂಧ್ರ ಪ್ರದೇಶ ಸರ್ಕಾರದ ನಿರ್ಧಾರದಿಂದ ಸ್ಫೂರ್ತಿ ಪಡೆದ ತೆಲಂಗಾಣ ಸರ್ಕಾರ ಕೂಡಾ ಎನ್ಟಿಆರ್ ಗಾರ್ಡನ್ನಲ್ಲಿ ವಿಶ್ವದ ಅತಿದೊಡ್ಡ ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಕೈ ಹಾಕಿದೆ. ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಅಡಿಗಲ್ಲು ಹಾಕಿದ್ದರು. ಇಲ್ಲಿ ದಲಿತ ಅಧ್ಯಯನ ಕೇಂದ್ರ ನಿರ್ಮಿಸುವುದು ಸರ್ಕಾರದ ಉದ್ದೇಶ.