ನವದೆಹಲಿ: ಜಮ್ಮು ಕಾಶ್ಮೀರದ ವೈಷ್ಣೋ ದೇವಿ ದೇವಾಲಯಕ್ಕೆ ತೆರಳುವ ಭಕ್ತರ ಸಂಖ್ಯೆಗೆ ಕಡಿವಾಣ ಹಾಕಿದ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಪೀಠ(ಎನ್ಜಿಟಿ) ವು ದಿನಕ್ಕೆ 50 ಸಾವಿರ ಭಕ್ತರಿಗೆ ಮಾತ್ರ ಅನುವು ಮಾಡಿಕೊಡಬೇಕೆಂದು ಹೇಳಿದೆ.
50 ಸಾವಿರಕ್ಕಿಂತ ಹೆಚ್ಚು ಭಕ್ತರು ಆಗಮಿಸಿದ್ದಲ್ಲಿ ಅವರಿಗೆ ಅರ್ಧಕುಮಾರಿ ಅಥವಾ ಕತ್ರದಲ್ಲಿ ತಂಗಲು ವ್ಯವಸ್ಥೆ ಮಾಡಿಕೊಡಬೇಕೆಂದು ಸೂಚಿಸಿದೆ.
ವೈಷ್ಣೋ ದೇವಾಲಯಕ್ಕೆ ತೆರಳಲು ಕುದುರೆ, ಕತ್ತೆ ಹಾಗೂ ಇತರೇ ಪ್ರಾಣಿಗಳನ್ನು ಬಳಕೆ ಮಾಡುವ ಕುರಿತು ಪ್ರಶ್ನಿಸಿ ಎನ್ಜಿಟಿಗೆ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠವು ಈ ತೀರ್ಮಾನ ತೆಗೆದುಕೊಂಡಿದೆ.
₹40ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಹೊಸ ಮಾರ್ಗವು ನವೆಂಬರ್ 24ರಿಂದ ಪ್ರವಾಸಿಗರಿಗೆ ಮುಕ್ತವಾಗಲಿದ್ದು, ಕೇವಲ ಪಾದಚಾರಿಗಳು ಹಾಗೂ ಬ್ಯಾಟರಿ ಚಾಲಿತ ಕಾರುಗಳ ಓಡಾಟಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ಈ ನಿಯಮ ಉಲ್ಲಂಘಿಸಿದ್ದಲ್ಲಿ ₹2,000 ದಂಡ ವಿಧಿಸಬೇಕು ಎಂದು ಆಡಳಿತ ಮಂಡಳಿಗೆ ಸೂಚಿಸಿದೆ.
ಕಳೆದ ವರ್ಷ ವೈಷ್ಣೋ ದೇವಿ ದೇಗುಲಕ್ಕೆ 77ಲಕ್ಷ ಭಕ್ತರು ಆಗಮಿಸಿದ್ದರು.