ನವದೆಹಲಿ: ಯೂರಿಯಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಸಲುವಾಗಿ ದೇಶದ ಪ್ರತಿ ತಾಲ್ಲೂಕು ಕೇಂದ್ರಗಳಲ್ಲಿ ಮೂತ್ರ ಬ್ಯಾಂಕ್ ಸ್ಥಾಪಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
‘ಮಾನವನ ಮೂತ್ರದಲ್ಲಿ ಸಾಕಷ್ಟು ನೈಟ್ರೋಜನ್ ಇದೆ. ಇದು ವ್ಯರ್ಥವಾಗುತ್ತಿದೆ. ಈ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸಬೇಕಿದೆ. ಈ ಯೋಜನೆಯ ಪ್ರಯೋಗ ಮಾಡುವುದರಿಂದ ಯಾವುದೇ ಅಪಾಯವಿರದೆಂದು ನಾನು ಭಾವಿಸುತ್ತೇನೆ’ ಎಂದು ಗಡ್ಕರಿ ಅವರ ಹೇಳಿಕೆ ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಆರಂಭದಲ್ಲಿ ನಾಗ್ಪುರದ ದಾಪೇವಾಡ ಹಳ್ಳಿಯಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೆ ತರಲಾಗುವುದು ಎಂದು ಗಡ್ಕರಿ ತಿಳಿಸಿದ್ದಾರೆ.
ರೈತರು ಕ್ಯಾನ್ಗಳಲ್ಲಿ 10 ಲೀಟರ್ಗಳಷ್ಟು ಮೂತ್ರ ಸಂಗ್ರಹಿಸಿ ತಾಲ್ಲೂಕು ಕೇಂದ್ರಗಳಿಗೆ ತೆಗೆದುಕೊಂಡು ಹೋಗಿ ಕೊಡಬೇಕು. ಅವರಿಗೆ ಪ್ರತಿ ಲೀಟರ್ಗೆ ₹1ರಂತೆ ನೀಡಲಾಗುವುದು. ಸ್ವೀಡನ್ನ ವಿಜ್ಞಾನಿಗಳ ಸಹಯೋಗದೊಂದಿಗೆ ಈ ಯೋಜನೆ ಆರಂಭಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.