ನವದೆಹಲಿ: ಸಮ– ಬೆಸ ನೋಂದಣಿ ಸಂಖ್ಯೆಯ ವಾಹನಗಳಿಗೆ ದಿನ ಬಿಟ್ಟು ದಿನ ಅವಕಾಶ ಯೋಜನೆ ಜಾರಿ ವೇಳೆ ಮಹಿಳೆಯರು ಮತ್ತು ದ್ವಿಚಕ್ರ ವಾಹನಗಳಿಗೆ ವಿನಾಯಿತಿ ನೀಡಲು ರಾಷ್ಟ್ರೀಯ ಹಸಿರು ಪೀಠ (ಎನ್ಜಿಟಿ) ಸ್ಪಷ್ಟವಾಗಿ ನಿರಾಕರಿಸಿದೆ.
10 ವರ್ಷ ಹಳೆಯದಾದ ಡೀಸೆಲ್ ವಾಹನಗಳ ಸಂಚಾರವನ್ನು ತಕ್ಷಣದಿಂದಲೇ ನಿಷೇಧಿಸುವಂತೆ ಎನ್ಜಿಟಿ ಮಂಗಳವಾರ ದೆಹಲಿ ಸರ್ಕಾರಕ್ಕೆ ತಾಕೀತು ಮಾಡಿದೆ.
ಹೆಚ್ಚುತ್ತಿರುವ ದೆಹಲಿಯ ವಾಯುಮಾಲಿನ್ಯದ ಬಗ್ಗೆ ಎನ್ಜಿಟಿ ಮುಖ್ಯಸ್ಥ ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ತೀವ್ರ ಆತಂಕ ವ್ಯಕ್ತಪಡಿಸಿದರು.
ನಗರದಲ್ಲಿ ಅತ್ಯಂತ ಹೆಚ್ಚಿನ ಮಾಲಿನ್ಯಕಾರಕ ಪ್ರದೇಶಗಳನ್ನು ಇಂದೇ ಗುರುತಿಸಿ, ಮರ, ಗಿಡಗಳಿಗೆ ನೀರು ಸಿಂಪಡಿಸುವ ಬದಲು ಎತ್ತರದ ಕಟ್ಟಡಗಳಿಂದ ನೀರು ಸಿಂಪಡಿಸಿ ಎಂದು ಅವರು ಸಲಹೆ ಮಾಡಿದರು.
ಜೀವನಾವಶ್ಯಕ ವಸ್ತುಗಳನ್ನು ತಯಾರಿಸುವ ಕೈಗಾರಿಕೆಗಳು ಕಾರ್ಯನಿರ್ವಹಿಸಲು ಅವಕಾಶ ನೀಡುವಂತೆ ಸ್ವತಂತ್ರ ಕುಮಾರ್ ಸೂಚಿಸಿದರು.
‘ಉತ್ತರ ಪ್ರದೇಶ, ಹರಿಯಾಣ ಮತ್ತು ಪಂಜಾಬ್ ಸರ್ಕಾರಗಳು ಪರಸ್ಪರ ದೋಷಾರೋಪಣೆ ಮಾಡುವುದನ್ನು ಬಿಟ್ಟು ಬೇರೆ ಏನು ಮಾಡುತ್ತಿವೆ’ ಎಂದು ಅವರು ತರಾಟೆಗೆ ತೆಗೆದುಕೊಂಡರು.
ಮಹಿಳೆಯರು, ಶಾಲಾ ಮಕ್ಕಳು, ಅತಿಗಣ್ಯರ ವಾಹನ ಮತ್ತು ದ್ವಿಚಕ್ರ ವಾಹನಗಳಿಗೆ ವಿನಾಯಿತಿ ನೀಡದೆ ಸಮ–ಬೆಸ ವಾಹನ ಸಂಚಾರ ನಿಯಮ ಜಾರಿ ಮಾಡುವಂತೆ ಎನ್ಜಿಟಿಯು ಇತ್ತೀಚೆಗೆ ದೆಹಲಿ ಸರ್ಕಾರಕ್ಕೆ ತಾಕೀತು ಮಾಡಿತ್ತು.
ಈ ಆದೇಶ ಮಾರ್ಪಾಡು ಮಾಡುವಂತೆ ಕೋರಿ ದೆಹಲಿ ಸರ್ಕಾರ ಮನವಿ ಸಲ್ಲಿಸಿತ್ತು.
**
ದೆಹಲಿಯಲ್ಲಿ ಪರಿಸರ ಮತ್ತು ಆರೋಗ್ಯ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ನಾವು ನಮ್ಮ ಮಕ್ಕಳಿಗೆ ಅನಾರೋಗ್ಯಕರ ಶ್ವಾಸಕೋಶಗಳನ್ನು ಕೊಡುಗೆ ನೀಡುವಂತಾಗಬಾರದು –ನ್ಯಾಯಮೂರ್ತಿ ಸ್ವತಂತ್ರ ಕುಮಾರ್, ಹಸಿರು ನ್ಯಾಯಮಂಡಳಿ ಮುಖ್ಯಸ್ಥ