ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘಟಿತರಾದರೆ ಮಾತ್ರ ಅಧಿಕಾರ ಕೈವಶ

Last Updated 20 ನವೆಂಬರ್ 2017, 6:50 IST
ಅಕ್ಷರ ಗಾತ್ರ

ಬಳ್ಳಾರಿ:‘ಛಲವಾದಿಗಳು ಸಂಘಟಿತರಾದರೆ ಮಾತ್ರ ಗ್ರಾಮ ಪಂಚಾಯಿತಿಯಿಂದ ಉನ್ನತ ಹಂತದವರೆಗೆ ಅಧಿಕಾರ ಪಡೆಯಲು ಸಾಧ್ಯ. ಹೀಗಾಗಿ ಒಡಕುಗಳನ್ನು ಮರೆತು ಒಗ್ಗಟ್ಟಿನ ಕಡೆಗೆ ಗಮನ ಹರಿಸಬೇಕು’ ಎಂದ ಛಲವಾದಿ ಮಹಾಸಭಾದ ಸ್ಥಾಪಕ ಕೆ.ಶಿವರಾಮು ಸಲಹೆ ನೀಡಿದರು.

ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಭಾನುವಾರ ಜಿಲ್ಲಾ ಘಟಕ ಏರ್ಪಡಿಸಿದ್ದ  ಒನಕೆ ಓಬವ್ವ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಉದ್ಘಾಟಿಸಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಒಕ್ಕಲಿಗರು, ಲಿಂಗಾಯತರು, ವಿಶ್ವಕರ್ಮರು, ಕುರುಬರು, ಸವಿತಾ ಸಮಾಜ, ರೆಡ್ಡಿ ಸಮಾಜದವರು ಸಂಘಟಿರಾಗಿದ್ದಾರೆ. ಅವರ ಸಮಾವೇಶಗಳು ಬೃಹತ್ತಾಗಿ ನಡೆಯುತ್ತಿವೆ. ಆದರೆ ಛಲವಾದಿಗಳು ಮಾತ್ರ ಏಕೆ ಸಂಘಟಿತರಾಗಿಲ್ಲ’ ಎಂದು ಪ್ರಶ್ನಿಸಿದರು.

‘ಪರಿಶಿಷ್ಟ ಸಮುದಾಯದ ಬೋವಿಗಳು, ಲಂಬಾಣಿಗಳು ಸಂಘಟಿತರಾಗಿ ಸಮಾವೇಶ ಮಾಡುತ್ತಿದ್ದಾರೆ. ಆದರೆ, ಛಲವಾದಿಗಳು ಸಮಾವೇಶ ಏಕೆ ಹಮ್ಮಿಕೊಳ್ಳಬಾರದು? ಇನ್ನಾದರೂ ಒಗ್ಗಟ್ಟಾಗದಿದ್ದರೆ ಬೇರೆ ಜಾತಿಗಳ ಅಬ್ಬರದಲ್ಲಿ ಮುಚ್ಚಿ ಹೋಗುತ್ತೀರಿ’ ಎಂದು ಎಚ್ಚರಿಸಿದ ಅವರು, ‘ ಈ ಕಾರ್ಯಕ್ರಮವನ್ನು ಸಮಾವೇಶವನ್ನಾಗಿ ರೂಪಿಸಬೇಕಾಗಿತ್ತು’ ಎಂದರು.

ತಪ್ಪು ಮಾಹಿತಿ: ‘ಪರಿಶಿಷ್ಟ ಜಾತಿಯಲ್ಲಿ ಬಲಗೈ ಸಮುದಾಯವಾದ ಛಲವಾದಿಗಳ ಜನಸಂಖ್ಯೆ ಹೆಚ್ಚಿದ್ದರೂ, ಎಡಗೈ ಸಮುದಾಯದವರು ತಾವೇ ಹೆಚ್ಚಿದ್ದೇವೆ ಎಂದು ರಾಜಕೀಯ ಪಕ್ಷಗಳಿಗೆ ತಪ್ಪು ಮಾಹಿತಿ ನೀಡಿ ಚುನಾವಣೆ ಟಿಕೆಟ್‌ ಗಳಿಸುತ್ತಿದ್ದಾರೆ. ಪ್ರತಿಬಾರಿ ಅವರೇ ಅಧಿಕಾರ ಪಡೆಯುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಪರಿಶಿಷ್ಟ ಸಮುದಾಯದವರ ಜನಸಂಖ್ಯೆ 1.08 ಕೋಟಿ ಇದ್ದರೂ ಅಧಿಕಾರ ಪಡೆಯಲು ಸಾಧ್ಯವಾಗದಿರುವುದಕ್ಕೆ ಒಳಗಿನ ಎಡ–ಬಲ ಎಂಬ ಒಡಕು ಕೂಡ ಕಾರಣ. ಪರಿಣಾಮವಾಗಿ, ಪರಿಶಿಷ್ಟರಿಗೆ ಹೋಲಿಸಿದರೆ ಕಡಿಮೆ ಜನಸಂಖ್ಯೆಯುಳ್ಳ ಒಕ್ಕಲಿಗರು ಮತ್ತು ಲಿಂಗಾಯತರು ಅಧಿಕಾರ ಪಡೆಯುತ್ತಿದ್ದಾರೆ. ಇದೆಂಥ ದುರವಸ್ಥೆ ನಮ್ಮದು?’ ಎಂದು  ಹೇಳಿದರು.

ಅಧಿಕಾರ ತಪ್ಪಿಸಿದ ಕಾಂಗ್ರೆಸ್: ‘ದಲಿತರು ಮತ್ತು ಮುಸಲ್ಮಾನರ ಮತ ಪಡೆದು ಏಳು ದಶಕ ಅಧಿಕಾರ ನಡೆಸಿದ ಕಾಂಗ್ರೆಸ್‌ ಪಕ್ಷ, ದಲಿತರಿಗೆ ಅಧಿಕಾರ ನೀಡದೆ ವಂಚಿಸಿದೆ. ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ್‌ ಅವರು ಮುಖ್ಯಮಂತ್ರಿಯಾಗುವ ಅವಕಾಶವೂ ಕೈ ತಪ್ಪಿದೆ. ಇಂಥ ಪಕ್ಷಕ್ಕೆ ನಾನೇಕೆ ಸೇರಲಿ? ಬಿಎಸ್‌ಪಿಗೆ ಅಧಿಕಾರ ಪಡೆಯುವ ಶಕ್ತಿ ಇದ್ದಿದ್ದರೆ ಅಲ್ಲಿಗೇ ಹೋಗುತ್ತಿದ್ದೆ. ಆದರೆ ಅದು ಸಾಧ್ಯವಿಲ್ಲ. ಹೀಗಾಗಿ ದಲಿತರ ಪರವಾಗಿರುವ ಬಿಜೆಪಿ ಸೇರಿದ್ದೇನೆ’ ಎಂದು ಶಿವರಾಮು ಪ್ರತಿಪಾದಿಸಿದರು.

ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್‌ ಸ್ವಾಮೀಜಿ, ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಹಾ
ಸಭಾ ಜಿಲ್ಲಾ ಘಟಕದ ಅಧ್ಯಕ್ಷ ಸಿ.ನರಸಪ್ಪ,ಪ್ರೊ.ರಾಜೇಂದ್ರಪ್ರಸಾದ್‌ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT