</p><p>‘ಪದ್ಮಿನಿ ಮತ್ತು ಅಲ್ಲಾವುದ್ದೀನ್ ಖಿಲ್ಜಿ ನಡುವೆ ಪ್ರಣಯವಿದ್ದಂತೆ ಚಿತ್ರಿಸಿದ್ದರೆ ಅದು ಇತಿಹಾಸವನ್ನು ತಿರುಚಿದಂತೆ ಆಗುತ್ತದೆ. ಇದನ್ನು ಯಾರೊಬ್ಬರೂ ಸಹ ಸಹಿಸುವುದಿಲ್ಲ ಹಾಗೂ ಈ ಸಂಬಂಧ ಪ್ರತಿಭಟನೆ ಸೂಕ್ತವಾದುದೇ’ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಪ್ರತಿಕ್ರಿಯಿಸಿರುವುದು ವರದಿಯಾಗಿದೆ.</p><p>ಈ ಮೂಲಕ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಮುಖಂಡರೊಬ್ಬರು ಪದ್ಮಾವತಿ ಚಿತ್ರದ ಕುರಿತು ವಿರೋಧ ವ್ಯಕ್ತಪಡಿಸಿದಂತಾಗಿದೆ. ‘ರಾಣಿ ಪದ್ಮಾವತಿ ತನ್ನ ಸತಿತ್ವ ಮತ್ತು ಘನತೆ ಕಾಪಾಡುವುದು ಹಾಗೂ ಮೊಘಲರಿಗೆ ಶರಣಾಗುವುದರ ಬದಲಾಗಿ ಅಗ್ನಿ ಪ್ರವೇಶ ಮಾಡಿ, ತಮ್ಮನ್ನು ತಾವೇ ಸುಟ್ಟುಕೊಂಡಿದ್ದರು’ ಎಂದು ಇತಿಹಾಸದ ಮೂಲಕ ನಂಬಲಾಗಿದೆ.</p><p>ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತಿ’ ಚಲನಚಿತ್ರದಲ್ಲಿ ದೀಪಿಕಾ ಪಡುಕೋಣೆ ಪದ್ಮಾವತಿಯಾಗಿ ಕಾಣಿಸಿಕೊಂಡಿದ್ದು, ಅವರಿಗೂ ಬೆದರಿಕೆಯೊಡ್ಡಲಾಗಿದೆ. ಚಿತ್ರೀಕರಣದ ಸಮಯದಿಂದಲೂ ಚಿತ್ರದ ವಿರುದ್ಧ ಪ್ರತಿಭಟನೆ ನಡೆದು ಬನ್ಸಾಲಿ ಅವರ ಮೇಲೆ ಹಲ್ಲೆ ಮಾಡಲಾಗಿತ್ತು.</p><p>ಪದ್ಮಾವತಿ ಚಿತ್ರ ವಿರೋಧಿಸಿ ದೇಶದ ವಿವಿಧ ಕಡೆಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ತೀವ್ರಗೊಳ್ಳುತ್ತಿರುವಂತೆಯೇ, ಚಿತ್ರ ನಿರ್ಮಾಣ ಸಂಸ್ಥೆ ವಯಕಾಮ್18 ಮೋಷನ್ ಪಿಕ್ಚರ್ಸ್ ಸಿನಿಮಾ ಬಿಡುಗಡೆಯನ್ನು ಮುಂದೂಡಿದೆ. ಡಿ.1ಕ್ಕೆ ಚಿತ್ರ ಬಿಡುಗಡೆ ನಿಗದಿಯಾಗಿತ್ತು.</p></p>