ದೇವನಹಳ್ಳಿ: ರಾಜಧಾನಿಯಲ್ಲಿ ಅನ್ಯ ಭಾಷೆಯನ್ನು ಕನ್ನಡವನ್ನಾಗಿ ಪರಿವರ್ತಿಸಲು ಪಣ ತೊಡಲಾಗಿದೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ರಾಜ್ಯ ಸಂಸ್ಥಾಪಕ ಅಧ್ಯಕ್ಷ ನಾಗೇನಹಳ್ಳಿ ಕೃಷ್ಣಮೂರ್ತಿ ತಿಳಿಸಿದರು.
ವಿಜಯಪುರ ಕ್ರಾಸ್ ಬಳಿ ಜನಶಕ್ತಿ ವೇದಿಕಯ ನಗರ ಘಟಕ ಶಾಖೆ ನಾಮಫಲಕ ಅನಾವರಣಗೊಳಿಸಿ ಮಾತನಾಡಿ, ರಾಜ್ಯದ ಗಡಿ ಭಾಗದಲ್ಲಿ ಕನ್ನಡ ಭಾಷೆ ಅತಿ ಹೆಚ್ಚು ಸೊರಗಿದೆ. ರಾಜ್ಯ ಸರ್ಕಾರ ಗಡಿ ಶಾಲೆಗಳಲ್ಲಿ ಮೂಲ ಸೌಲಭ್ಯಕ್ಕೆ ಒತ್ತು ನೀಡಿಲ್ಲ ಎಂದರು.
ರಾಜ್ಯದಲ್ಲಿರುವ ಅನೇಕ ಕಲ್ಲುಗಣಿಗಳಲ್ಲಿ ಹೊರ ರಾಜ್ಯದವರು ಕೂಲಿಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಅಂಥ ಜಾಗದಲ್ಲಿ ಶಾಲೆ ಆರಂಭಿಸಿ ಕನ್ನಡ ಭಾಷೆಯನ್ನು ಕಲಿಸಬೇಕು. ವಾರ್ಷಿಕವಾಗಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡುವ ಸರ್ಕಾರ ಅನ್ಯಭಾಷಿಕರು ಈ ನೆಲದಲ್ಲಿ ಇದ್ದು ಕನ್ನಡ ಕಲಿತು ಸಾಹಿತ್ಯ, ಕನ್ನಡ ಭಾಷಾಭಿಮಾನ ಇಟ್ಟುಕೊಂಡಿರುವವರನ್ನು ಗುರುತಿಸಿ ಕನ್ನಡದ ಭಾಷಾ ಪ್ರೇರಣೆಗೆ ಮುಂದಾಗಬೇಕು ಎಂದರು.
ವೇದಿಕೆ ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ತಬುಸುಂ, ರಾಜ್ಯ ಸಂಘಟನಾ ಕಾರ್ಯದರ್ಶಿ ನವೀನ್, ಗೌರವ ಅಧ್ಯಕ್ಷ ಪುಟ್ಟೆಗೌಡ, ರಾಜ್ಯ ಸಮಿತಿ ಸದಸ್ಯ ನಾಗೇಶ್, ಜಿಲ್ಲಾ ಘಟಕ ಅಧ್ಯಕ್ಷ ಹನುಮಂತ ರೆಡ್ಡಿ, ರೈತ ಘಟಕ ಜಿಲ್ಲಾ ಅಧ್ಯಕ್ಷ ಜಯರಾಮಣ್ಣ, ಜಿಲ್ಲಾ ಕಾರ್ಮಿಕ ಘಟಕ ಅಧ್ಯಕ್ಷ ನರಗನಹಳ್ಳಿ ಶ್ರೀನಿವಾಸ್ ಇದ್ದರು.