ಹಂಸಭಾವಿ: ‘ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು’ ಎಂದು ಒತ್ತಾಯಿಸಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್ನಲ್ಲಿ ಭಾನುವಾರ ಅನಿರ್ದಿಷ್ಟಾವಧಿ ಅರೆಬೆತ್ತಲೆ ಪ್ರತಿಭಟನೆ ಪ್ರಾರಂಭಿಸಿದ್ದಾರೆ.
ಜಿಲ್ಲೆಯ ರೈತರು ಸತತ ನಾಲ್ಕು ವರ್ಷದ ಬರಗಾಲದ ಬಳಿಕ ಬೆಳೆದ ಬೆಳೆ ಅತಿವೃಷ್ಟಿ, ಅನಾವೃಷ್ಟಿ ಹಾಗೂ ಸೈನಿಕ ಹುಳು ಬಾಧೆಯಿಂದ ಸಂಪೂರ್ಣ ನಾಶವಾಗಿದೆ. ಹೀಗಾಗಿ, ಜಿಲ್ಲೆಯ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಆದ್ದರಿಂದ, ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿನ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಲಾಯಿತು.
ಬೆಳೆ ಹಾನಿಯನ್ನು ವೈಜ್ಞಾನಿಕವಾಗಿ ಸಮೀಕ್ಷೆ ಮಾಡಿ ಸೂಕ್ತ ಪರಿಹಾರ ನೀಡಬೇಕು ಹಾಗೂ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಭರವಸೆ ನೀಡುವ ವರೆಗೂ ನಮ್ಮ ಪ್ರತಿಭಟನೆಯನ್ನು ವಾಪಸ್ ತೆಗೆದುಕೊಳ್ಳುವುದಿಲ್ಲ ಎಂದು ಒತ್ತಾಯಿಸುತ್ತಿದ್ದೇವೆ ಎಂದು ಸಂಚಾಲಕ ಮಾಲತೇಶ ಪೂಜಾರ ತಿಳಿಸಿದರು.
ಶಿವಣ್ಣ ಜಾವಣ್ಣನವರ, ಜಗದೀಶ ದಂಡಗೀಹಳ್ಳಿ, ಪರಮೇಶಪ್ಪ ಕಟ್ಟೆಕಾರ, ಮಂಜಪ್ಪ ಮುದಿಯಪ್ಪನವರ, ಸಿದ್ದು ರಾಜೇರ, ಪ್ರಭು ಮತ್ತೀಹಳ್ಳಿ, ಈರಣ್ಣ ಮುದಿಯಣ್ಣನವರ, ಗೀತಾ ಕಟ್ಟೇಕಾರ, ಪ್ರೇಮಾ ಕೆ., ಗೀತಾ ಮುದಿಯಣ್ಣನವರ ಸೇರಿದಂತೆ ಒಟ್ಟು 40 ರೈತರು ಆನಿರ್ದಿಷ್ಟಾವಧಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ.