ಕನಕಪುರ: ರಾಜ್ಯದ ವಿದ್ಯುತ್ ಬೇಡಿಕೆಯ ಪೂರೈಕೆಯನ್ನು ತಗ್ಗಿಸಲು ಸ್ವಾವಲಂಬನೆಗಾಗಿ ಇಂಧನ ಇಲಾಖೆಯು ತಾಲ್ಲೂಕಿನ ದೊಡ್ಡ ಆಲಹಳ್ಳಿ ಗ್ರಾಮ ಸಮೀಪದ ಡಿ.ಕೆ.ಶಿ. ನಗರದ ಬಳಿ 20 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಘಟಕವನ್ನು ನಿರ್ಮಿಸಲಾಗಿದೆ. 18 ಮೆವಾ ವಿದ್ಯುತ್ ಈಗಾಗಲೇ ಉತ್ಪಾದನೆಯಾಗುತ್ತಿದೆ.
ಇಂಧನ ಇಲಾಖೆಯ ಸಚಿವ ಡಿ.ಕೆ.ಶಿವಕುಮಾರ್ ಪ್ರಾಯೋಗಿ ಕವಾಗಿ ಮೊದಲಬಾರಿಗೆ ತಾಲ್ಲೂಕಿನ ಸ್ವಗ್ರಾಮವಾದ ದೊಡ್ಡ ಅಲಹಳ್ಳಿಯಲ್ಲಿ ಇಂತಹದೊಂದು ಪ್ರಯೋಗಕ್ಕೆ ಮುಂದಾಗಿದ್ದು ಜುಲೈ 2017ರಲ್ಲಿ ಘಟಕದ ಕಾಮಗಾರಿ ಪ್ರಾರಂಭಗೊಂಡಿದ್ದು ಡಿಸೆಂಬರ್
ವೇಳೆಗೆ ಯೋಜನೆ ಪೂರ್ಣಗೊಳ್ಳಲಿದೆ.
ರೈತರಿಂದ 100 ಎಕರೆ ಜಮೀನನ್ನು ವಾರ್ಷಿಕವಾಗಿ ಬಾಡಿಗೆಗೆ ಪಡೆದಿರುವ ಜಿ.ಆರ್.ಟಿ. ಪ್ರೈವೇಟ್ ಲಿಮಿಟೆಡ್ ಕಂಪನಿಯು ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿರುವ ನಿರ್ಮಾಣ ಕಾರ್ಯಕ್ಕೆ ಮುಂದಾಗಿದೆ. ಸುಮಾ ರು ₹100 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ನಡೆಯುತ್ತಿದೆ.
ಈಗಾಗಲೇ ಶೇ 80 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಸೂರ್ಯನ ಶಾಖದಿಂದ ವಿದ್ಯುತ್ ಉತ್ಪತ್ತಿ ಯಾಗುತ್ತಿದ್ದು ಪ್ರಸ್ತುತ ಕೋಡಿಹಳ್ಳಿ, ದೊಡ್ಡಾಲಹಳ್ಳಿ ಮತ್ತು ಸಾತನೂರು ಹೋಬಳಿ ವ್ಯಾಪ್ತಿಯ ಜನತೆಗೆ ವಿದ್ಯುತ್ ಪೂರೈಕೆ ಮಾಡುತ್ತಿದೆ, ಜಿ.ಆರ್.ಟಿ.
ಕಂಪೆನಿಯು ಸರ್ಕಾರಕ್ಕೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಯೂನಿಟ್ಗೆ ₹4.92 ಬೆಲೆಯಂತೆ ವಿದ್ಯುತ್ ಪೂರೈಕೆ ಮಾಡುತ್ತಿದೆ.
ಒಪ್ಪಂದ: ವಿದ್ಯುತ್ ಉತ್ಪಾದನೆಗೆ ರೈತರಿಂದ ಪ್ರತಿ ಎಕರೆಗೆ ವಾರ್ಷಿಕವಾಗಿ ₹25 ಸಾವಿರ ಬಾಡಿಗೆ, ₹50 ಸಾವಿರ ಮುಂಗಡ ಹಣ, 2 ವರ್ಷಕ್ಕೊಮ್ಮೆ ಶೇ 5 ರಷ್ಟು ಬಾಡಿಗೆ ಹಣವನ್ನು ಹೆಚ್ಚಿಸಲಾಗುವುದು. 28 ವರ್ಷಗಳ ವರೆಗೆ ರೈತರೊಂದಿಗೆ ಒಪ್ಪಂದ
ಮಾಡಿಕೊಳ್ಳಲಾಗಿದೆ.
ರೈತರ ಕೃಷಿ ಪಂಪ್ಸೆಟ್ ಗಳಿಗೆ ರೈತರೇ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳುವಂತ ಸೂರ್ಯರೈತ ಯೋಜನೆ ಞಯನ್ನು ಇಂಧನ ಇಲಾಖೆ ಯಿಂದ ತಾಲ್ಲೂಕಿನಲ್ಲಿ ಮಾಡಲಾಗಿದೆ. ಯೋಜನೆ ಅಳವಡಿಸಿಕೊಂಡಿರುವ ರೈತರು ತಮ್ಮ ಕೃಷಿ ಪಂಪ್ಸೆಟ್ ಗೆ ದಿನದ 24 ಗಂಟೆ ವಿದ್ಯುತ್ ಪೂರೈಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಯೋಜನೆಯ ವ್ಯವಸ್ಥಾಪಕರಾದ ವಿ.ಆರ್.ವಿರೂಪಾಕ್ಷ ಮತ್ತು ಗಿರೀಶ್ ಹೇಳಿದ್ದಾರೆ.
‘ಈ ಯೋಜನೆ ಪ್ರಾರಂಭಗೊಳ್ಳುವ ಮುನ್ನ ವಿದ್ಯುತ್ಗೆ ತೊಂದರೆಯಿತ್ತು. ಈಗ ಇಲ್ಲಿಯೇ ಕರೆಂಟ್ ತಯಾರು ಮಾಡುತ್ತಿರುವುದರಿಂದ ನಮಗೆ ದಿನವಿಡೀ ವಿದ್ಯುತ್ ಸಿಗುತ್ತಿದೆ. ಹೆಚ್ಚಿನ ವೋಲ್ಟೇಜ್ನೊಂದಿಗೆ ಕೃಷಿ ಪಂಪ್ ಸೆಟ್ ಗಳಿಗೂ ವಿದ್ಯುತ್ ದೊರೆಯುತ್ತಿರುವುದರಿಂದ ವ್ಯವಸಾಯಕ್ಕೆ ಅನುಕೂಲವಾಗಿದೆ’ ಎಂದು ಡಿ.ಕೆ.ಶಿ.ನಗರದ ನಿವಾಸಿ ಜಯಮ್ಮ ಹೇಳಿದ್ದಾರೆ.
‘ಸಚಿವ ಡಿ.ಕೆ.ಶಿವಕುಮಾರ್ ಅವರು ಇಂಧನ ಇಲಾಖೆ ವಹಿಸಿಕೊಂಡ ಮೇಲೆ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆಯನ್ನು ತಂದಿದ್ದಾರೆ. ವಿದ್ಯುತ್ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಲು ಅನೇಕ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದಾರೆ. ಅದರಲ್ಲಿ ಸೌರ ವಿದ್ಯುತ್ ಉತ್ಪಾದನೆ ತಾಲ್ಲೂಕಿನಲ್ಲಿ ಯಶಸ್ವಿಯಾಗಿ ಆಗುತ್ತಿದೆ’ ಎಂದು ಡಿ.ಕೆ.ಶಿವಕುಮಾರ್ ಮಾಧ್ಯಮ ವಕ್ತಾರ ಮರಸಪ್ಪ ರವಿ ಹೇಳಿದ್ದಾರೆ.
* *
ಡಿಸೆಂಬರ್ ನಲ್ಲಿ ವಿದ್ಯುತ್ ಉತ್ಪಾದನೆ ಆಗಲಿದೆ.ರೈತರ ಭೂಮಿ ಬಾಡಿಗೆ 28 ವರ್ಷಗಳ ವರೆಗೆ ಹೆಚ್ಚಳವಾಗಲಿದ್ದು ಹೆಚ್ಚು ಲಾಭದಾಯಕವಾಗಿದೆ.
ವಿ.ಆರ್.ವಿರೂಪಾಕ್ಷ ಮತ್ತು ಗಿರೀಶ್ ಜಿ.ಆರ್.ಟಿ.
ಪ್ರಾಜೆಕ್ಟ್ ಮ್ಯಾನೇಜರ್ ಗಳು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.