ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 5 ಕೋಟಿ ಅನುದಾನ ಕೊಡಿ

Last Updated 22 ನವೆಂಬರ್ 2017, 6:41 IST
ಅಕ್ಷರ ಗಾತ್ರ

ಬೀದರ್: ‘ರಾಜ್ಯ ಜಾನಪದ ಅಕಾಡೆಮಿಗೆ ಪ್ರಸ್ತುತ ನೀಡುತ್ತಿರುವ ಅನುದಾನವನ್ನು ₹ 1 ಕೋಟಿಯಿಂದ ₹ 5 ಕೋಟಿಗೆ ಹೆಚ್ಚಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ’ ಎಂದು ಅಕಾಡೆಮಿ ಅಧ್ಯಕ್ಷ ಬಿ.ಟಾಕಪ್ಪ ಹೇಳಿದರು.

‘ಹೆಚ್ಚು ಅನುದಾನ ನೀಡಿದರೆ ಅಳಿವಿನ ಅಂಚಿನಲ್ಲಿರುವ ಜಾನಪದ ಕಲೆಗಳನ್ನು ಉಳಿಸಲು ಹೆಚ್ಚು ಹೆಚ್ಚು ಕಾರ್ಯಕ್ರಮ ಹಮ್ಮಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಮಂಗಳವಾರ ಇಲ್ಲಿ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ಕೇಂದ್ರ ಸರ್ಕಾರ ಕಲಾವಿದರಿಗೆ ₹ 6 ಸಾವಿರ ಮಾಸಾಶನ ಕೊಡುತ್ತಿದೆ. ರಾಜ್ಯ ಸರ್ಕಾರ 2013ರಲ್ಲಿ ಕಲಾವಿದರಿಗೆ ನೀಡುತ್ತಿರುವ ಮಾಸಾಶನವನ್ನು ₹1,500ಗೆ ಹೆಚ್ಚಿಸಿದೆ. ಆದರೂ ಅದನ್ನು ₹ 2 ಸಾವಿರಕ್ಕೆ ಏರಿಸುವಂತೆ ಒತ್ತಾಯಿಸಲಾಗಿದೆ’ ಎಂದು ಹೇಳಿದರು.

‘ಮಾಸಾಶನ ಪಡೆಯಲು ನಕಲಿ ಕಲಾವಿದರು ಹುಟ್ಟುಕೊಂಡಿದ್ದಾರೆ. ಹೀಗಾಗಿ ಪ್ರತಿ ಜಿಲ್ಲೆಗೆ ಭೇಟಿ ನೀಡಿ ಕೂಲಂಕಷವಾಗಿ ಪರಿಶೀಲಿಸಿದ ನಂತರ ಮಾಸಾಶನಕ್ಕೆ ಅರ್ಹ ಕಲಾವಿದರ ಹೆಸರು ಶಿಫಾರಸು ಮಾಡಲಾಗುತ್ತಿದೆ. ಬೀದರ್‌ ಜಿಲ್ಲೆಯಲ್ಲಿ 48 ಕಲಾವಿದರು ಮಾಸಾಶನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳಿಂದ ಅತಿ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ರಾಜ್ಯದ ವಿವಿಧೆಡೆಯಿಂದ ಒಟ್ಟು 1,400 ಕಲಾವಿದರ ಅರ್ಜಿಗಳು ಬಂದಿವೆ’ ಎಂದು ತಿಳಿಸಿದರು.

‘58 ವರ್ಷ ಮೀರಿದ ಕಲಾವಿದರು ವಯಸ್ಸಿನ ದಾಖಲೆ ಕೊಡಬೇಕು ಅಥವಾ ಅಫಿಡವಿಟ್‌ ಸಲ್ಲಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರುವ ಕಲಾವಿದರ ವಾರ್ಷಿಕ ಆದಾಯ ₹ 40 ಸಾವಿರ ಹಾಗೂ ನಗರ ಪ್ರದೇಶದಲ್ಲಿ ವಾಸವಾಗಿರುವ ಕಲಾವಿದರ ಆದಾಯ ₹ 50 ಸಾವಿರ ಮೀರಿರಬಾರದು‘ ಎಂದು ಹೇಳಿದರು.

‘ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಕಲಾವಿದರ ಬ್ಯಾಂಕ್ ಖಾತೆಗೆ ನೇರವಾಗಿ ಗೌರವಧನವನ್ನು ಜಮಾ ಮಾಡುವ ವ್ಯವಸ್ಥೆ ಮಾಡಲಾಗಿದೆ. 67 ಜಾನಪದ ಕಲಾವಿದರ ವ್ಯಕ್ತಿಚಿತ್ರ ದಾಖಲೀಕರಣಕ್ಕೆ ₹ 2 ಕೋಟಿ ಕಾಯ್ದಿರಿಸಲಾಗಿದ್ದು, ಇನ್ನೂ ಕೆಲಸ ಆಗಬೇಕಿದೆ’ ಎಂದು ತಿಳಿಸಿದರು.

29ರಿಂದ ಜಾನಪದ ಉತ್ಸವ
ಬೀದರ್‌: ‘ಜಿಲ್ಲಾ ಮಟ್ಟದ ಜಾನಪದ ಉತ್ಸವ ನವೆಂಬರ್‌ 29 ಹಾಗೂ 30ರಂದು ಬೀದರ್‌ನ ಜಿಲ್ಲಾ ರಂಗ ಮಂದಿರದಲ್ಲಿ ನಡೆಯಲಿದ್ದು, ಜಿಲ್ಲೆಯ 35 ಕಲಾ ತಂಡಗಳು ಪಾಲ್ಗೊಳ್ಳಲಿವೆ’ ಎಂದು ರಾಜ್ಯ ಜಾನಪದ ಅಕಾಡೆಮಿ ಅಧ್ಯಕ್ಷ ಬಿ.ಟಾಕಪ್ಪ ತಿಳಿಸಿದರು.

‘ರಾಜ್ಯದಲ್ಲಿ 132 ಕಲೆಗಳನ್ನು ಗುರುತಿಸಲಾಗಿದೆ. ಧಾರ್ಮಿಕ ಹಾಗೂ ಪ್ರದರ್ಶಿತ ಕಲೆಗಳು ಮಾತ್ರ ಅಸ್ತಿತ್ವದಲ್ಲಿವೆ. ಇನ್ನುಳಿದ ಕಲೆಗಳನ್ನು ಉಳಿಸಿಕೊಳ್ಳಲು ಕಲಾವಿದರಿಗೆ ಪ್ರೋತ್ಸಾಹ ನೀಡಬೇಕಾಗಿದೆ’ ಎಂದು ಹೇಳಿದರು.

ಅಕಾಡೆಮಿಯ ಸದಸ್ಯ ವಿಜಯಕುಮಾರ ಸೋನಾರೆ, ರಿಜಿಸ್ಟ್ರಾರ್‌ ಸಿದ್ರಾಮ ಸಿಂದೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ವಟಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT