ಸಿರುಗುಪ್ಪ: ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿನ ಮಹಾರಾಷ್ಟ್ರ ಮೂಲದ ಕತ್ತೆಗಳ ಹಾಲಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಜನರು ಒಂದು ಟೀ ಗ್ಲಾಸ್ ಹಾಲಿಗೆ ₹ 100 ನಂತೆ ಖರೀದಿಸಲು ಮುಗಿ ಬೀಳುತ್ತಿದ್ದಾರೆ. ಮಹಾರಾಷ್ಟ್ರದ ನಾಚಿದಡಿ ಜಿಲ್ಲೆಯ ಗುರುವಾಡ ನಗರದ 30 ಕತ್ತೆಗಳು ಪಟ್ಟಣದಲ್ಲಿ ಬೀಡು ಬಿಟ್ಟಿವೆ.
‘ಕತ್ತೆ ಹಾಲು ಕುಡಿಯುವುದರಿಂದ ಮಂಡಿಚಿಪ್ಪಿನ ನೋವು, ಹೊಟ್ಟೆ ಉಬ್ಬರ, ಗ್ಯಾಸ್ಟ್ರೀಕ್, ಅಸ್ತಮಾ , ವಾತ, ಮೂರ್ಚೆ ರೋಗ ವಾಸಿಯಾಗುತ್ತದೆ. ಅಲ್ಲದೇ ಈ ಹಾಲಿನಿಂದ ರೋಗ ನಿರೋಧಕ ಶಕ್ತಿ ಅಡಗಿದೆ’ ಎಂದು ಕತ್ತೆಗಳ ಮಾಲಿಕ ಬಾಲಾಜಿ ಅವರು ಹೇಳುತ್ತಾರೆ.
ಹಾಲನ್ನು ಮನೆ ತೆರಳಿ ಮಾರಾಟ ಮಾಡುತ್ತಿರುವುದು ಕಂಡು ಬಂತು. ಒಂದು ಕಡೆ ಜನ ಖರೀದಿ ಮಾಡಲು ಮುಗಿಬೀಳುತ್ತಿದ್ದರು. ಇದನ್ನು ಕುತೂಹಲದಿಂದ ನೋಡುವರ ಸಂಖ್ಯೆ ಕಡಿಮೆ ಇರಲಿಲ್ಲ.