ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರ್ಯ–ಚಂದ್ರರೇ ದಿಕ್ಸೂಚಿಗಳು

Last Updated 24 ನವೆಂಬರ್ 2017, 19:30 IST
ಅಕ್ಷರ ಗಾತ್ರ

ನಮ್ಮ ಜೀವನಪ್ರಯಾಣ ಹೇಗಿರಬೇಕು?
ಋಗ್ವೇದದ ಸೊಲ್ಲೊಂದು ಇದನ್ನು ಅತ್ಯಂತ ಮಾರ್ಮಿಕವಾಗಿ ಹೇಳಿದೆ:
ಸ್ವಸ್ತಿಪಂಥಾಮನುಚರೇಮ
ಸೂರ್ಯಾಚಂದ್ರಮಸಾವಿವ |

‘ಸೂರ್ಯಚಂದ್ರರಂತೆ ಅತ್ಯಂತ ಕ್ಷೇಮದಿಂದ ದಾರಿಯಲ್ಲಿ ನಡೆಯೋಣ.’

ಸೂರ್ಯ–ಚಂದ್ರರು ನಿರಂತರವಾಗಿ ಸುತ್ತುತ್ತಲೇ ಇರುತ್ತಾರೆ; ಅವರ ಈ ಪರಿಭ್ರಮಣಕ್ಕೆ ಯಾವುದು ಕೂಡ ಅಡ್ಡಿಯಾಗದು. ಅಂತೆಯೇ ನಮ್ಮ ಜೀವನವೂ ಕೂಡ ನಿರಂತರ ಗತಿಶೀಲವಾಗಿರತಕ್ಕದ್ದು ಎಂಬುದು ವೇದದ ಆಶಯ. ಸೋಲು–ಗೆಲುವು, ಹೊಗಳಿಕೆ–ತೆಗಳಿಕೆ, ಸುಖ–ದುಃಖ, ಹಗಲು–ರಾತ್ರಿ, ಒಳಿತು–ಕೆಡುಕು – ಯಾವುದೂ ಕೂಡ ನಮ್ಮ ಜೀವನಪ್ರಯಾಣವನ್ನು ನಿಲ್ಲಿಸುವ ಅಡ್ಡಿ–ಆತಂಕಗಳು ಆಗಬಾರದು. ಇದು ವೇದ ನಮಗೆ ನೀಡುತ್ತಿರುವ ಉಪದೇಶ. ವೇದದಲ್ಲಿ ಇಂಥ ಸಾವಿರಾರು ಸಂದೇಶಗಳು ನಮ್ಮ ಬದುಕಿಗೆ ಒದಗುವಂತಿವೆ.

ನಮ್ಮ ಜೀವನವನ್ನು ಉದ್ಧರಿಸಬಲ್ಲ ವೇದವನ್ನು ಕುರಿತು ಪರಂಪರೆ ಹೇಗೆ ಕಂಡಿದೆ? ಒಂದೆರಡು ಮಾತುಗಳನ್ನು ನೋಡಬಹುದು:

ಅಸ್ಯ ಮಹತೋ ಭೂತಸ್ಯ ನಿಃಶ್ವಸಿತಮೇತದ್ಯದೃಗ್ವೇದಃ
ಇದು ಬೃಹದಾರಣ್ಯಕೋಪನಿಷತ್ತಿನ ಮಾತು. ‘ಪರಮಾತ್ಮನ ನಿಃಶ್ವಾದಂತೆ ಋಗ್ವೇದ ಮೊದಲಾದವುಗಳು ಇವೆ’ ಎನ್ನುವುದು ಈ ಮಾತಿನ ಸಾರಾಂಶ.

ಋಚಸ್ಸಾಮಾನಿ ಯಜೂಗ್‌ಂಷಿ | ಸಾಹಿ ಶ್ರೀರಮೃತಾ ಸತಾಮ್‌ |
ಇದು ತೈತ್ತಿರೀಯ–ಬ್ರಾಹ್ಮಣದ ಮಾತು. ‘ಋಗ್ವೇದ, ಸಾಮವೇದ ಮತ್ತು ಯಜುರ್ವೇದಗಳೇ ಸತ್ಪುರುಷರ ಸಂಪತ್ತು’. ಇದು ಈ ಮಾತಿನ ತಾತ್ಪರ್ಯ.

ಇನ್ನು ‘ವೇದ’ ಎನ್ನುವುದಕ್ಕೆ ಏನು ಅರ್ಥ – ಎನ್ನುವುದನ್ನು ನೋಡಬಹುದು.
‘ವಿದ್‌’ ಎನ್ನುವ ಧಾತುವಿನಿಂದ ‘ವೇದ’ ಎಂಬ ಶಬ್ದ ಸಿದ್ಧವಾಗುತ್ತದೆ. ಇದಕ್ಕೆ ನಾಲ್ಕು ಪ್ರಧಾನ ಅರ್ಥಗಳನ್ನು ಕಾಣಿಸಲಾಗಿದೆ:

1. ಇರುವುದು; ಸ್ಥಿತಿ.
2. ತಿಳಿಯುವುದು.
3. ವಿಚಾರ ಮಾಡುವುದು.
4. ಪಡೆದುಕೊಳ್ಳುವುದು.
1. ಶಾಶ್ವತವಾಗಿರುವ ಅರಿವನ್ನು ಒದಗಿಸುವುದೇ ವೇದ.
2. ಪ್ರತ್ಯಕ್ಷ ಮತ್ತು ಅನುಮಾನಗಳಿಂದ ಯಾವ ಅರಿವನ್ನು ಪಡೆಯಲು ಸಾಧ್ಯವಾಗುವುದಿಲ್ಲವೋ ಅಂಥ ಅರಿವನ್ನು ತಿಳಿಯುವುದು.
3. ಅರಿವಿನ ನೆಲೆ–ಬೆಲೆಗಳನ್ನು ಕುರಿತು ವಿಚಾರ ಮಾಡುವುದು.
4. ಪಡೆದುಕೊಳ್ಳುವುದು – ಎಂದರೆ ಪುರುಷಾರ್ಥಗಳನ್ನು ಪಡೆದುಕೊಳ್ಳುವುದು ಎಂದು ಅರ್ಥ.
ವೇದಗಳಿಗೆ ಭಾಷ್ಯವನ್ನು ಬರೆದ ಸಾಯಣಾಚಾರ್ಯರು ವೇದವನ್ನು ಕುರಿತು ನೀಡಿರುವ ವ್ಯಾಖ್ಯೆ ಮೇಲಿನ ಎಲ್ಲ ಅರ್ಥಗಳನ್ನೂ ಒಳಗೊಂಡಂತಿದೆ:

ಇಷ್ಟಪ್ರಾಪ್ತ್ಯನಿಷ್ಟಪರಿಹಾರಯೋಃ ಅಲೌಕಿಕಂ ಉಪಾಯಂ ಯೋ ಗ್ರಂಥೋ ವೇದಯತಿ ಸ ವೇದಃ |

‘ಬಯಸಿದ್ದನ್ನು ಪಡೆಯುವುದು ಮತ್ತು ಕೇಡಾಗುವುದನ್ನು ತಪ್ಪಿಸಿಕೊಳ್ಳುವುದು – ಈ ವಿಷಯದಲ್ಲಿ ಲೋಕದಿಂದ ಗೊತ್ತಾಗದ ಉಪಾಯವನ್ನು ತಿಳಿಸುವ ಗ್ರಂಥವೇ ವೇದ’.

ಶಂಕರಾಚಾರ್ಯರು ಕೂಡ ಇಂಥದೇ ಮಾತನ್ನು ಹೇಳಿದ್ದಾರೆ: ‘ಪ್ರತ್ಯಕ್ಷ ಮತ್ತು ಅನುಮಾನಗಳಿಂದ ಗೊತ್ತಾಗದ ಇಷ್ಟಪ್ರಾಪ್ತಿ ಮತ್ತು ಅನಿಷ್ಟಪರಿಹಾರಗಳನ್ನು ತಿಳಿಸಿಕೊಡಲು ಹೊರಟಿರುವುದೇ ವೇದ’ ಎನ್ನುವುದು ಅವರ ಮಾತು. (ಇಲ್ಲಿ ‘ಅನುಮಾನ’ ಎಂದರೆ Doubt ಎಂದಲ್ಲ; Inference - ಊಹೆ ಎಂದು.)

ನಿಮ್ಮ ಅನಿಸಿಕೆಗಳನ್ನು ನಮಗೆ ಕಳುಹಿಸಿ. ವಿಳಾಸ: ಸಂಪಾದಕರು, ಪ್ರಜಾವಾಣಿ, ಅರಿವು ವಿಭಾಗ, ನಂ. 75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು – 560001 email: arivu@prajavani.co.in.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT