ಬಾದಾಮಿ: ಪಟ್ಟಣದ ಕೆಲವು ವಾರ್ಡುಗಳಲ್ಲಿ ಅನೇಕ ತಿಂಗಳಿಂದ ಹಗಲು ಹೊತ್ತಿನಲ್ಲಿ ವಿದ್ಯುತ್ ದೀಪಗಳು ಉರಿಯುತ್ತಿದ್ದರೂ ಪುರಸಭೆ ಇಲ್ಲವೇ ಹೆಸ್ಕಾಂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಮುಖ್ಯ ಮಾರುಕಟ್ಟೆ, ಕಿಲ್ಲಾ ಓಣಿ, ಮ್ಯೂಸಿಯಂ ರಸ್ತೆಯ ಪ್ರಾಥಮಿಕ ಶಾಲೆ, ಮಹಾಕೂಟೇಶ್ವರ ಚಿತ್ರ ಮಂದಿರ ರಸ್ತೆ ಮತ್ತು ಕಾಲೇಜು ರಸ್ತೆಯಲ್ಲಿ ವಿದ್ಯುತ್ ಕಂಬಗಳಲ್ಲಿ ಹಗಲು ಹೊತ್ತಿನಲ್ಲೇ ಬೀದಿ ದೀಪ ಉರಿಯುತ್ತಿವೆ.
‘ರಾತ್ರಿ ಹೊತ್ತಿನಲ್ಲಿ ಸರಿಯಾಗಿ ಬೀದಿ ದೀಪ ಹಾಕುವುದಿಲ್ಲ. ರಾತ್ರಿಯಿಡೀ ಕಗ್ಗತ್ತಲು. ಆದರೆ ಹಗಲು ಹೊತ್ತಿನಲ್ಲಿ ಇಲ್ಲಿ ದೀಪ ಉರಿಯುತ್ತವೆ. ಕೆಲವಡೆ ಕಂಬಗಳಿವೆ ದೀಪಗಳನ್ನು ಅಳವಡಿಸಿಲ್ಲ. ಪುರಸಭೆ ಮುಖ್ಯಾಧಿಕಾರಿ ಮತ್ತು ಜನಪ್ರತಿನಿಧಿಗಳು ಕಾಳಜಿ ವಹಿಸಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಪುರಸಭೆ ಮುಖ್ಯಾಧಿಕಾರಿಗೆ ಕರೆ ಮಾಡಿದರೂ ಅವರು ಸ್ವೀಕರಿಸಲಿಲ್ಲ.