ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳುವಯೋಗಿ ಚನ್ನವೀರ ಶಿವಯೋಗಿ ಶ್ರೀ

Last Updated 25 ನವೆಂಬರ್ 2017, 9:37 IST
ಅಕ್ಷರ ಗಾತ್ರ

ಹೊಳಲು: ಸಂತರೆಂದರೆ ಪೂಜೆ, ಧಾರ್ಮಿಕ ಆಚರಣೆ ಹಾಗೂ ಪುರಾಣ ಪುಣ್ಯ ಕಥೆಗಳನ್ನು ಹೇಳವುದಷ್ಟೇ ಅವರ ಕೆಲಸ ಎಂಬ ಕಲ್ಪನೆ ಜನಮಾನಸದಲ್ಲಿ ಬೇರೂರಿದೆ. ಆದರೆ ಅವರೂ ಕೂಡ ರೈತರಂತೆ ಕಾಯಕಯೋಗಿಗಳು ಎಂಬುದನ್ನು ಸಾಬೀತು ಮಾಡಿದ್ದಾರೆ ಜಂಗಮ ಕ್ಷೇತ್ರ ಲಿಂಗನಾಯಕನಹಳ್ಳಿಯ ಚನ್ನವೀರ ಶಿವಯೋಗಿ ಶ್ರೀಗಳು.

ನೇಗಿಲು ಹೂಡಿ ಹೊಲವನ್ನು ಹೊಡೆದು, ಬೆಳೆ ತೆಗೆಯುವಲ್ಲಿ ಶ್ರೀಗಳು ನಿಸ್ಸೀಮರು. ಹೂವಿನಹಡಗಲಿ ತಾಲ್ಲೂಕಿನ ಲಿಂಗನಾಯಕನಹಳ್ಳಿಯ ಜಂಗಮ ಕ್ಷೇತ್ರದ ಈ ಶ್ರೀಗಳು ಮಠದ ಜಮೀನಿನಲ್ಲಿ ಬೆಳೆ ಬೆಳೆದು ಉಳುವ ಯೋಗಿಯಾಗಿದ್ದಾರೆ.

ಮಾದರಿ ರೈತ ಈ ಸಂತ: ಕಾಯಕದಲ್ಲೇ ಕೈಲಾಸ ಕಾಣುವ ಶರಣರ ನುಡಿಯಂತೆ ಶ್ರೀಗಳು ಆದರ್ಶ ಕೃಷಿಕರಾಗಿ ಹೊಲ ಗದ್ದೆಗಳಲ್ಲಿ ದುಡಿಯುತ್ತಿದ್ದಾರೆ. ಪ್ರತಿದಿನ ಬೆಳಿಗ್ಗೆ 4ಕ್ಕೆ ಎದ್ದು ಜಮೀನಿಗೆ ಹೋಗಿ, ಕೂಲಿ ಕಾರ್ಮಿಕರು ಬರುವಷ್ಟರಲ್ಲಿ ಕೃಷಿ ಚಟುವಟಿಕೆ ಆರಂಭಿಸುತ್ತಾರೆ. ಮಠದ ಜಮೀನಿನಲ್ಲಿ 20 ಎಕರೆ ಭತ್ತ, 6 ಎಕರೆ ದ್ರಾಕ್ಷಿ, 5 ಎಕರೆ ದಾಳಿಂಬೆ, 12 ಎಕರೆ ಮಾವು, 2 ಎಕರೆ ಸಿರಿಧಾನ್ಯ, 1ಎಕರೆ ಅಡಿಕೆ, 1 ಎಕರೆ ಬಾಳೆ, 1 ಎಕರೆ ಸಾಗುವಾನಿ, 1ಎಕರೆ ಪೇರಲಾ ಸೇರಿದಂತೆ 1 ಎಕರೆ ಎಲೆಬಳ್ಳಿಯನ್ನು ಬೆಳೆಯುತ್ತಿದ್ದಾರೆ. ಬಹುತೇಕ ಸಾವಯವ ಕೃಷಿ ಪದ್ಧತಿಯನ್ನೇ ಅಳವಡಿಸಿಕೊಂಡಿರುವ ಕಾರಣ ಉತ್ತಮ ಇಳುವರಿ ಪಡೆದು ಮಾದರಿ ಕೃಷಿಕರಾಗಿ ಹೊರಹೊಮ್ಮಿದ್ದಾರೆ.

ಸಾವಯವ ಕೃಷಿಯಿಂದ ಬೆಳೆದ ಪದಾರ್ಥಗಳ ಸೇವನೆಯಿಂದ ಕಾಯಿಲೆಗಳು ದೂರಾಗುತ್ತವೆ ಎನ್ನುವುದು ಶಿವಯೋಗಿಗಳ ಅಭಿಪ್ರಾಯ. ಅಧುನಿಕತೆ ಭರಾಟೆಯಲ್ಲಿ ಶರಣ ಸಂಸ್ಕೃತಿ, ಧಾರ್ಮಿಕ ನಂಬಿಕೆ ಹಾಗೂ ಭಕ್ತಿ ಭಾವಗಳು ನಶಿಸಿಹೋಗುತ್ತಿರುವ ಈ ದಿನಮಾನಗಳಲ್ಲಿ ಸಮಾಜವನ್ನು ತಿದ್ದುವುದು ಸಾಮಾನ್ಯದ ಮಾತಲ್ಲ. ಹೀಗಿರುವಾಗ ಚನ್ನವೀರ ಶಿವಯೋಗಿಗಳು ಸದಾ ಸಮಾಜ ಸೇವೆಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡು, ಕ್ಷೇತ್ರದ ಪರಂಪರೆಯನ್ನು ಅರ್ಥಪೂರ್ಣವಾಗಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ನ.25ರಂದು ಕೃಷಿಮೇಳ: ಇದುವರೆಗೂ ಕೃಷಿ ವಿಶ್ವವಿದ್ಯಾಲಯ ಹಾಗೂ ಪಟ್ಟಣದಲ್ಲಿ ಹಮ್ಮಿಕೊಳ್ಳುತ್ತಿದ್ದ ಕೃಷಿಮೇಳವನ್ನು ಗ್ರಾಮೀಣ ಭಾಗದ ರೈತರ ಹಿತದೃಷ್ಟಿಯಿಂದ ಮಠದ ಆವರಣದಲ್ಲಿ ಏರ್ಪಡಿಸುತ್ತಿರುವುದು ಮಹತ್ವದ ವಿಚಾರವಾಗಿದೆ. ಹಲವು ದಶಕಗಳಿಂದ ಮಠದ ಕಾರ್ಯಕ್ರಮಗಳ ಜೊತೆಗೆ ಅನೇಕ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ರೈತರಿಗೆ ಅನುಕೂಲವಾಗುವ ಕೃಷಿ ಮೇಳೆ  ನ.25 ರಿಂದ ಆರಂಭವಾಗುತ್ತಿದೆ.

ಕೃಷಿಮೇಳದಲ್ಲಿ ರೈತರಿಗೆ ಲಾಭಗಳು ಕೃಷಿ ಇಲಾಖೆ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ತೋಟಗಾರಿಕೆ ಇಲಾಖೆ ಹಾಗೂ ಪಂಶುಸಂಗೋಪನಾ ಇಲಾಖೆ ಮತ್ತು ವಿವಿಧ ಅಭಿವೃದ್ಧಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ ಈ ಕೃಷಿಮೇಳದಲ್ಲಿ, ರೈತರಿಗೆ ಸಾವಯವ ಕೃಷಿ, ಸಮಗ್ರ ಕೃಷಿ ಪದ್ಧತಿ, ಆಧುನಿಕ ಕೃಷಿ ಪದ್ಧತಿ, ಹೈನುಗಾರಿಕೆ ಹಾಗೂ ವಿವಿಧ ಆಹಾರ ಉತ್ಪನ್ನಗಳ ಮೌಲ್ಯವರ್ಧನೆ ಕುರಿತು ವಸ್ತುಪ್ರದರ್ಶನ, ಹಾಗೂ ರೈತರಿಂದ ರೈತರಿಗಾಗಿ ವಿಚಾರ ಸಂಕೀರ್ಣವನ್ನು ಹಮ್ಮಿಕೊಳ್ಳಲಾಗಿದೆ.

ನ.25 ಮತ್ತು 26 ರವರೆಗೆ ಎರಡು ದಿನಗಳು ನಡೆಯುವ ಕೃಷಿಮೇಳದಲ್ಲಿ ಹೆಚ್ಚು ರೈತರು ಭಾಗವಹಿಸಬೇಕು ಎಂದು ಹೂವಿನಹಡಗಲಿ ಕೃಷಿ ವಿಸ್ತರಣಾ ಮುಂದಾಳು ಡಾ.ಸಿ.ಎಂ ಕಾಲಿಬಾವಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT