ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರ್ತಿಗಳಿಗೆ ಜೀವ ತುಂಬುವ ‘ಗುರಿಕಾರ’

Last Updated 26 ನವೆಂಬರ್ 2017, 7:06 IST
ಅಕ್ಷರ ಗಾತ್ರ

ಕಕ್ಕೇರಾ: ಕಲೆ ಎಲ್ಲರನ್ನು ಕೈ ಬೀಸಿ ಕರೆಯುತ್ತದೆ. ಆದರೆ, ಕೆಲವರನ್ನು ಮಾತ್ರ ಆರಿಸಿಕೊಳ್ಳುತ್ತದೆ ಎಂಬ ಮಾತಿನಂತೆ ಮೂರ್ತಿಗಳಿಗೆ ಜೀವ ತುಂಬುವ ಇಲ್ಲಿನ ಕಲಾವಿದ ಅಮರೇಶ ಗುರಿಕಾರ ಕೂಡ ಆ ಕೆಲವರಲ್ಲಿ ಒಬ್ಬರಾಗಿ ನಿಲ್ಲುತ್ತಾರೆ.

ಅಮರೇಶ ಅವರು ತಯಾರಿಸದ ಮೂರ್ತಿಗಳಿಲ್ಲ. ಪಶು, ಪಕ್ಷಿಗಳಿಲ್ಲ. ಗ್ರಾಮೀಣ ಸೊಗಡಿನಲ್ಲಿ ಸಿಮೆಂಟ್‌ ಕಲಾಕೃತಿಗಳನ್ನು ಮಾಡುವುದರಲ್ಲಿ ಸಿದ್ಧಹಸ್ತರು. ಪುಣೆ, ಬೆಂಗಳೂರು, ಕೊಪ್ಪಳ, ಆಲಮಟ್ಟಿ, ಹುಬ್ಬಳ್ಳಿ, ಸಿಗ್ಗಾವ, ಘತ್ತರಗಿ, ಗೊಟಗುಡಿ ಹೀಗೆ ಹತ್ತಾರು ಊರುಗಳಲ್ಲಿ ಅಮರೇಶ ಹಾಗೂ ಅವರ ಸಂಗಡಿಗರು ತಯಾರಿಸಿದ ಕಲಾಕೃತಿಗಳು ನೋಡುಗರ ಮನಸ್ಸನ್ನು ಸೆಳೆಯುತ್ತಿವೆ.

‘ಕಡು ಬಡತನದಲ್ಲಿದ್ದಾಗ 10 ವರ್ಷಗಳ ಹಿಂದೆ ತಂದೆಯವರು ಸಾವನ್ನಪ್ಪಿದರು. ಆಗ ಬದುಕೇ ಬೇಸರವೆನಿಸಿತು. ಸಹೋದರ ಪರಶುರಾಮ ಹಾಗೂ ತಾಯಿಯ ಧೈರ್ಯದ ಮಾತುಗಳು ನನ್ನಲ್ಲಿ ಛಲ ತುಂಬಿ, ಜೀವನದ ದಾರಿ ತೋರಿಸಿದವು. ಅವರು ನನ್ನ ಪಾಲಿನ ದೇವರು’ ಎಂದು ಕಲಾವಿದ ಅಮರೇಶ ಹೇಳಿದರು.

‘ಮೂರ್ತಿ  ತಯಾರಿಸುವವರ ಹತ್ತಿರ  ಕೆಲಸ ಮಾಡಿದೆ. ಆಗಲೇ ಮೂರ್ತಿ ತಯಾರಿಸುವುದನ್ನು  ಕಲಿತಿದ್ದೇನೆ. ಅದಕ್ಕೆ ನಮ್ಮ ಮಾಲೀಕರಾದ ಟಿ.ಬಿ.ಸೊಬಲಕ್ಕನವರ ಸಂಪೂರ್ಣ ಸಹಕಾರ ನೀಡಿದರು. ಆರ್ಥಿಕ ಪರಿಸ್ಥಿತಿ ತಲೆದೋರಿದಾಗ ಬಂಧು–ಬಳಗದಲ್ಲಿನ ಯಾರೂ ಸಹಾಯ ಮಾಡಲಿಲ್ಲ. ಕೊನೆಗೆ ಆ ಜೀವವಿಲ್ಲದ ಮೂರ್ತಿಗಳೇ
ನನಗೆ ಜೀವನ ಕೊಟ್ಟವು’ ಎನ್ನುತ್ತಾರೆ ಅವರು.

‘ಒಂದು ಮೂರ್ತಿ ತಯಾರಿಸಲು 15 ದಿನಗಳು ಅವಶ್ಯವಾಗಿ ಬೇಕಾಗುತ್ತದೆ. ಅದಕ್ಕೆ ಸಿಮೆಂಟ್‌,  ಮರಳು, ಕಬ್ಬಿಣ, ಇಟ್ಟಂಗಿ ಹಾಗೂ ಜಾಳಗಿ (ಮೆಸ್) ಬೇಕು’ ಎಂದು ಅಮರೇಶ ಹೇಳಿದರು. ‘ವಿಶ್ವದಾಖಲೆಯ ಮೂರ್ತಿಗಳನ್ನು ತಯಾರು ಮಾಡುವ ಈ ಪ್ರತಿಭಾವಂತ ಕಲಾವಿದರನ್ನು ಸರ್ಕಾರ ಗುರುತಿಸಿ, ಪ್ರೋತ್ಸಾಹಿಸಬೇಕು’ ಎನ್ನುವುದು ಕಲಾವಿದರ ಒತ್ತಾಯ. ಅಮರೇಶ ಅವರನ್ನು ಸಂಪರ್ಕಿಸಲು ಮೊಬೈಲ್‌: 91102 52415.

* * 

ಕಣ್ಣೀರು ಸುರಿಸುವುದರಿಂದ ಹೊಟ್ಟೆ ತುಂಬುವುದಿಲ್ಲ. ಬೆವರು ಹರಿಸಿ ದುಡಿದರೆ ಮೃಷ್ಟಾನ್ನ ಸಿಗುವುದರಲ್ಲಿ ಸಂದೇಹವಿಲ್ಲ. ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು.
ಅಮರೇಶ ಗುರಿಕಾರ
ಕಲಾವಿದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT