ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ; ಘನತೆ, ಸ್ವಾಭಿಮಾನದ ಪ್ರತೀಕ

Last Updated 27 ನವೆಂಬರ್ 2017, 5:20 IST
ಅಕ್ಷರ ಗಾತ್ರ

ಮಂಡ್ಯ: ‘ಭಾರತದ ಸಂವಿಧಾನ ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ತತ್ವದಡಿ ನಿರ್ಮಾಣಗೊಂಡಿದ್ದು ಘನತೆ ಹಾಗೂ ಸ್ವಾಭಿಮಾನದ ಪ್ರತೀಕವಾಗಿದೆ’ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಆತ್ಮಾನಂದ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಉದ್ಯಾನದಲ್ಲಿ ಬುದ್ಧಭಾರತ ಫೌಂಡೇಷನ್ ವತಿಯಿಂದ ಭಾನುವಾರ ಭಾರತ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಹಾಗೂ ಸಂವಿಧಾನದ ಗ್ರಂಥಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.

‘ಭಾರತೀಯರಾದ ನಾವು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ತತ್ವಗಳ ಜೊತೆ ಜೀವನ ನಡೆಸಬೇಕು. ಇವೇ ತತ್ವಗಳ ಅಡಿಪಾಯದ ಮೇಲೆ ಅಂಬೇಡ್ಕರ್‌ ಅವರು ಸಂವಿಧಾನ ರಚನೆ ಮಾಡಿದ್ದಾರೆ. ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ, ಅಭಿವ್ಯಕ್ತಿ, ನಂಬಿಕೆ, ಸ್ವಾತಂತ್ರವನ್ನು ಭಾರತದ ಪ್ರತಿಯೊಬ್ಬ ಪ್ರಜೆಯೂ ಎತ್ತಿ ಹಿಡಿಯಬೇಕು. ವ್ಯಕ್ತಿಗೌರವ, ದೇಶದ ಏಕತೆ ಮತ್ತು ಸಮಗ್ರತೆ, ಸಹೋದರತ್ವ, ಭ್ರಾತೃತ್ವಕ್ಕಾಗಿ ಸಂವಿಧಾನ ದೇಶಕ್ಕೆ ಅರ್ಪಣೆಯಾಗಿದೆ. ಭಾರತೀಯರಾದ ಎಲ್ಲರೂ ವಿಶೇಷವಾಗಿ ವಿದ್ಯಾರ್ಥಿಗಳು ಭಾರತ ಸಂವಿಧಾನದ ಮೂಲ ಪೀಠಿಕೆಯನ್ನು ಓದಿ ಅರ್ಥಮಾಡಿಕೊಂಡು ಮುನ್ನಡೆಯಬೇಕು’ ಎಂದು ಹೇಳಿದರು.

ದಸಂಸ ರಾಜ್ಯ ಘಟಕದ ಸಂಚಾಲಕ ಎಂ.ಬಿ. ಶ್ರೀನಿವಾಸ್ ಮಾತನಾಡಿ ‘ದೇಶದ ಕೆಲವೆಡೆ ಕೋಮುವಾದ ತಾಂಡವವಾಡುತ್ತಿದ್ದು ಇದು ಪ್ರಜಾಸತ್ತಾತ್ಮಕ ತತ್ವಗಳಿಗೆ ಮಾರಕವಾಗಿದೆ. ಸಂವಿಧಾನಕ್ಕೆ ವಿರೋಧವಾಗಿ ಹೇಳಿಕೆ ನೀಡುವವರು ಕೋಮು ಭಾವನೆಗಳನ್ನು ಕೆರಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅಂಥವರ ವಿರುದ್ಧ ಕಾನೂನು ರೀತಿಯಲ್ಲಿ ಶಿಕ್ಷಿಸುವ ಜವಾಬ್ದಾರಿಯನ್ನು ಸರ್ಕಾರಗಳು ಕೈಗೊಳ್ಳಬೇಕು. ಸಂವಿಧಾನದ ಮೂಲ ತತ್ವಗಳ ವಿರುದ್ಧ ಮಾತನಾಡುವವರ ವಿರುದ್ಧ ವಿವಿಧ ಸಂಘಟನೆಗಳು ಹೋರಾಟ ನಡೆಸಬೇಕು’ ಎಂದು ಹೇಳಿದರು.

ಬುದ್ಧಭಾರತ ಫೌಂಡೇಷನ್‌ ಅಧ್ಯಕ್ಷ, ವಕೀಲ ಜೆ.ರಾಮಣ್ಣ ಮಾತನಾಡಿ ‘ಸಂವಿಧಾನದ ಮೂಲ ಆಶಯಗಳ ಅರಿವು ಶೇ 75ರಷ್ಟು ಜನರಿಗೆ ಇಲ್ಲದೇ ಇರುವುದು ದುರದೃಷ್ಟಕರ. ಸರ್ಕಾರಗಳು ಸಂವಿಧಾನದ ತತ್ವಗಳನ್ನು ಸಾಮಾನ್ಯ ಜನರಿಗೆ ತಲುಪಿಸುವ ಜವಾಬ್ದಾರಿ ನಿರ್ವಹಣೆ ಮಾಡಬೇಕು. ಯುವ ಸಮುದಾಯ ಸಂವಿಧಾನ ಓದುವ, ಚರ್ಚೆ ನಡೆಸುವ, ವಿಚಾರ ಸಂಕಿರಣ ಆಯೋಜನೆ ಮಾಡುವ ಮೂಲಕ ಸಂವಿಧಾನ ಅರಿಯಬೇಕು. ದೇಶದ ಸಾರ್ವಭೌಮ ತತ್ವ ಉಳಿಯಬೇಕಾದರೆ ಸಂವಿಧಾನದ ಬಗ್ಗೆ ಯುವ ಸಮುದಾಯ ಜಾಗೃತಿ ಹೊಂದಬೇಕು. ಭಾರತದ ಹಿಂದಿನ ಪರಂಪರೆ ಮತ್ತು ಸಂವಿಧಾನ ಜಾರಿಗೊಂಡ ನಂತರದ ಸ್ಥಿತಿಯ ಇತಿಹಾಸ ಅರಿಯಬೇಕು’ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ರೈತಸಂಘ ಮಹಿಳಾ ಘಟಕದ ಉಪಾಧ್ಯಕ್ಷೆ ಅರುಣಾಜ್ಯೋತಿ, ಬುದ್ಧಭಾರತ ಫೌಂಡೇಷನ್‌ ಖಜಾಂಚಿ ಆಶಾಜ್ಯೋತಿ, ದಸಂಸ ಮುಖಂಡರಾದ ಬಸವರಾಜು, ನಟರಾಜು, ಪವನ್, ಮಲ್ಲಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT