ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂವಿಧಾನದ ಆಶಯಕ್ಕೆ ಧಕ್ಕೆ ಸಲ್ಲ’

Last Updated 27 ನವೆಂಬರ್ 2017, 6:12 IST
ಅಕ್ಷರ ಗಾತ್ರ

ದೊಡ್ಡಬೆಳವಂಗಲ (ದೊಡ್ಡಬಳ್ಳಾಪುರ): ದಲಿತ ಸಂಘಟನೆ ವಿಚಾರಗಳು, ಸಂಘಟನೆಯ ಮಹತ್ವವನ್ನು ಯುವಕರು ಗ್ರಾಮೀಣ ಭಾಗದ ಜನರನ್ನು ತಲುಪುವಂತೆ ಮಾಡಬೇಕಿದೆ ಎಂದು ದಲಿತ ಸಂಘರ್ಷ ಸಮಿತಿ ಕೆಂಪು ಸೇನೆ ರಾಜ್ಯ ಅಧ್ಯಕ್ಷ ಡಿ.ರಾಜಣ್ಣ ಹೇಳಿದರು.

ಅವರು ತಾಲ್ಲೂಕಿನ ದೊಡ್ಡಬೆಳವಂಗಲದಲ್ಲಿ ಭಾನುವಾರ ನಡೆದ ಡಾ.ಬಿ.ಆರ್‌.ಅಂಬೇಡ್ಕರ್‌ ಜನ್ಮ ದಿನಾಚಣೆ ಹಾಗೂ ವಿಶ್ವ ಜ್ಞಾನ ದಿನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಇಡೀ ವಿಶ್ವಕ್ಕೆ ಮಾದರಿಯಾಗಿ ನಮ್ಮ ದೇಶದ ಸಂವಿಧಾನ ರೂಪುಗೊಳ್ಳುವಲ್ಲಿ ಅಂಬೇಡ್ಕರ್‌ ಅವರ ಪಾತ್ರ ಮಹತ್ವದ್ದಾಗಿದೆ. ಸಂವಿಧಾನ ಅಂಗೀಕರಿಸಿದ ದಿನವನ್ನು ವಿಶ್ವ ಜ್ಞಾನದಿನವನ್ನಾಗಿ ಆಚರಿಸಲಾಗುತ್ತಿದೆ. ಸಂವಿಧಾನದ ಆಶಯಕ್ಕೆ ಧಕ್ಕೆ ತಾರದೆ, ಅದರಲ್ಲಿನ ಸಮಾನತೆ, ಜಾತ್ಯತೀತ ತತ್ವಗಳನ್ನು ಎಲ್ಲರೂ ಪಾಲಿಸಬೇಕು. ಆಡಳಿತ ನಡೆಸುವವರು ಇದನ್ನು ಸಮಪರ್ಕವಾಗಿ ಜಾರಿಗೆ ತರಬೇಕು’ ಎಂದು ಹೇಳಿದರು.

ದಲಿತ ಸಮುದಾಯ ಶೈಕ್ಷಣಿಕವಾಗಿ ಮುಂದೆ ಬರಲು ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳು ಇವೆ. ಇವುಗಳನ್ನು ಗ್ರಾಮೀಣ ಜನರಿಗೆ ತಲುಪುವಂತೆ ಮಾಡಬೇಕು. ಇದರಿಂದ ಹಲವಾರು ಜನ ಶಿಕ್ಷಣ ಹೊಂದಲು ಹಾಗೂ ಮುಖ್ಯವಾಹಿನಿಗೆ ಬರಲು ಸಹಕಾರಿಯಾಗಲಿದೆ. ಸಂಘಟನೆಯಿಂದ ಸಾಧನೆ ಮಾಡಲು ಹಲವಾರು ಅವಕಾಶಗಳಿವೆ. ಇದನ್ನು ಮನಗಂಡು ಯುವ ಸಮುದಾಯ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.

ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್‌ ಮಾತನಾಡಿ, ದಲಿತ ಸಂಘಟನೆ ರಾಜ್ಯದಲ್ಲಿ ಉದಯವಾದ ಉದ್ದೇಶ ಈಡೇರುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾವಂತ ಸಮುದಾಯ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಇದರಿಂದ ಮಾತ್ರ ದಲಿತರ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.

ಸಮಾಜಸೇವಕ ಟಿ.ರಾಮಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯೆ ಕನ್ಯಾಕುಮಾರಿಶ್ರೀನಿವಾಸ್‌, ತಾಲ್ಲೂಕು ಪಂಚಾಯಿತಿ ಸದಸ್ಯ ಡಿ.ಸಿ.ಶಶಿಧರ್‌, ಟಿಎಪಿಎಂಸಿಎಸ್‌ ನಿರ್ದೇಶಕ ನಾರನಹಳ್ಳಿ ಎಂ.ಗೋವಿಂದರಾಜು, ಡಿಎಸ್‌ಎಸ್‌ ಕೆಂಪು ಸೇನೆ ರಾಜ್ಯ ಉಪಾಧ್ಯಕ್ಷ ಗುರುಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಬಿ.ಶ್ರೀನಿವಾಸ್‌, ತಾಲ್ಲೂಕು ಅಧ್ಯಕ್ಷ ಹರ್ಷ, ದೊಡ್ಡಬೆಳವಂಗಲ ಹೋಬಳಿ ಗೌರವ ಅಧ್ಯಕ್ಷ ನರಸಿಂಹಯ್ಯ, ಮುಖಂಡರಾದ ರಾಮು, ಆನಂದ್‌, ಮಂಜುನಾಥ್‌ ಹಾಜರಿದ್ದರು. ಸಮಾರಂಭಕ್ಕು ಮುನ್ನ ಬೆಳ್ಳಿ ರಥದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಭಾವಚಿತ್ರದೊಂದಿಗೆ ನಡೆದ ಮೆರವಣಿಗೆಯಲ್ಲಿ ವಿವಿಧ ಜನಪದ ಕಲಾತಂಡಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT