ಅಥಣಿ: ‘ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಜಿಲ್ಲೆಯಿಂದ ಕನಿಷ್ಠ 16 ಮತಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗಿ ಕರ್ನಾಟಕದಲ್ಲಿ ಮಿಷನ್ 150ರ ಸಂಖ್ಯೆ ತಲುಪುತ್ತೇವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಹೇಳಿದರು. ಪಟ್ಟಣದಲ್ಲಿ ಸೋಮವಾರ ಪರಿವರ್ತನಾ ಯಾತ್ರೆ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯ ಸಚಿವರಾದ ವಿನಯ ಕುಲಕರ್ಣಿ ಮತ್ತು ಕೆ.ಜೆ.ಜಾರ್ಜ್ ಅವರ ವಿರುದ್ಧ ಕೊಲೆಯಾದವರ ಕುಟುಂಬದವರು ಎಲ್ಲ ಆಧಾರ ಒದಗಿಸಿದರು ಕೂಡ ಸಿಬಿಐ ತನಿಖೆಗೆ ಆದೇಶ ನೀಡದಿರುವುದು ಯಾವ ಕಾರಣಕ್ಕಾಗಿ ಎಂದು ಪ್ರಶ್ನಿಸಿದರು.
‘ಅನ್ನ ಭಾಗ್ಯಕ್ಕಾಗಿ ಕೇಂದ್ರ ಸರ್ಕಾರ ಅಕ್ಕಿಯನ್ನು 1 ಕಿಲೋಕ್ಕೆ ₹32 ನಂತೆ ಖರೀದಿ ಮಾಡಿ ₹ 3 ರೂಪಾಯಿಗೆ ಮತ್ತು ಗೋದಿಯನ್ನು ₹ 28 ರಂತೆ ಖರೀದಿ ಮಾಡಿ ₹ 2ರಂತೆ ರಾಜ್ಯ ಸರ್ಕಾರಕ್ಕೆ ಕಳುಹಿಸುತ್ತದೆ. ಆದರೆ ಸಿದ್ದರಾಮಯ್ಯ ಸರ್ಕಾರ ಕದ್ದು ಹೊರ ರಾಜ್ಯಗಳಿಗೆ ಮಾರಾಟ ಮಾಡುತ್ತಿದೆ. ಸರ್ಕಾರ ನೀಡಿದ ಅಂಕಿ ಆಂಶಗಳಂತೆ ಜನರಿಗೆ ಹಂಚದೆ ಗೋದಾಮಿನಲ್ಲಿ ಕೊಳೆಯುವಂತೆ ಮಾಡಿದೆ’ ಎಂದು ಆರೋಪಿಸಿದರು.
ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ಅಥಣಿ ಪಟ್ಟಣದ ಅಭಿವೃದ್ಧಿಗಾಗಿ,ಕುಡಿಯುವ ನೀರು ಮತ್ತು ನೈರ್ಮಲ್ಯಿಕರಣ ಯೋಜನೆಗೆ ₹ 70 ಕೋಟಿ ಅನುದಾನ ಕೊಡಿಸುವಲ್ಲಿ ಕೇಂದ್ರ ಸಚಿವರು ಸಹಕರಿಸಬೇಕು’ ಎಂದರು.
ಕೇಂದ್ರ ಸಚಿವ ಅನಂತಕುಮಾರ ಮಾತನಾಡಿ, ‘ಶಾಸಕ ಲಕ್ಷ್ಮಣ ಸವದಿ ಅವರ ಬೇಡಿಕೆಯಾದ,ಅಥಣಿ ಮತ ಕ್ಷೇತ್ರದ 60 ಸಾವಿರ ಎಕರೆ ಬರಡು ಭೂಮಿಯನ್ನು ನೀರಾವರಿ ವ್ಯಾಪ್ತಿಗೆ ಒಳಪಡಿಸಲು ಕೇಂದ್ರ ನೀರಾವರಿ ಸಚಿವರೊಂದಿಗೆ ಚರ್ಚಿಸಲಾಗುವುದು’ ಎಂದು ಹೇಳಿದರು.
ಸಂವಿಧಾನ ಸಮರ್ಪಣೆಯ ಜಾಹೀರಾತಿನಲ್ಲಿ ಡಾ.ಅಂಬೇಡ್ಕರ್ ಛಾಯಾಚಿತ್ರ ಮರೆಮಾಚುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತರಿಗೆ ಅನ್ಯಾಯ ಮಾಡಿದ್ದಾರೆ. ಕನ್ನಡ ಭಾಷೆ, ನೆಲ, ಜಲ, ಕನ್ನಡಿಗರ ಸರ್ವಾಂಗೀಣ ಅಭಿವೃದ್ಧಿ ಬಗ್ಗೆ ಚರ್ಚೆ ಆಗಬೇಕಿದ್ದ ಕನ್ನಡ ಸಾಹಿತ್ಯ ಪರಿಷತ್ ವೇದಿಕೆಯನ್ನು ಚಂಪಾ ದುರುಪಯೋಗ ಪಡಿಸಿಕೊಂಡು ಮತ ಮತ್ತು ಮೂತ್ರದ ಬಗ್ಗೆ ಮಾತನಾಡಿ ಕನ್ನಡಿಗರ ಗೌರವಕ್ಕೆ ಧಕ್ಕೆ ತಂದಿದ್ದಾರೆ’ ಎಂದು ಆರೋಪಿಸಿದರು. ಕೆಂದ್ರ ಸಚಿವ ರಮೇಶ ಜಿಗಜಿಣಗಿ ಮಾತನಾಡಿ, ಧರ್ಮ ಮತ್ತು ರಾಜಕಾರಣ ಅನ್ಯೋನ್ಯವಾಗಿದ್ದರೆ ಸುಂದರ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.
ಸಂಸದರಾದ ಸಂಗಣ್ಣ ಕರಡಿ, ಪ್ರಭಾಕರ ಕೋರೆ, ಮಾಜಿ ಸಂಸದ ರಮೇಶ ಕತ್ತಿ, ಶಾಸಕರಾದ ರಾಜು ಕಾಗೆ, ಶಶಿಕಲಾ ಜೊಲ್ಲೆ, ಸಂಜಯ ಪಾಟೀಲ, ಗೊವಿಂದ ಕಾರಜೋಳ, ಅರವಿಂದ ಲಿಂಬಾವಳಿ, ಪಿ.ರಾಜು, ದುರ್ಯೋಧನ ಐಹೋಳೆ, ಮಹಾಂತೇಶ ಕವಟಗಿಮಠ, ಹಾಲಪ್ಪ ಆಚಾರ್ಯ, ಸೋಮಣ್ಣ ಬೇವಿನಮರದ, ಅರುಣ ಶಹಾಪುರ, ಮುರಗೇಶ ನಿರಾಣಿ, ಮಾಜಿ ಶಾಸಕರಾದ ಮಹಾದೇವಪ್ಪ ಯಾದವಾಡ, ವಾಮನ ಆಚಾರ್ಯ, ಅಶೋಕ ಪೂಜಾರಿ ಇದ್ದರು.
* *
ಕೇಂದ್ರದಲ್ಲಿ ಆಡಳಿತ ವಿರುದ್ಧ ಸಮಯದಲ್ಲಿ ಹಗರಣಗಳ ಸರಮಾಲೆಯನ್ನು ಹೊತ್ತು ದೇಶದ ಜನರಿಂದ ಹೀನಾಯವಾಗಿ ತಿರಸ್ಕೃತಗೊಂಡ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯನವರಿಗೆ ಪ್ರಧಾನಿಯನ್ನು ಟೀಕಿಸುವ ಹಕ್ಕಿಲ್ಲ
ಬ.ಎಸ್. ಯಡಿಯೂರಪ್ಪ
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.