ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲ ಸೌಲಭ್ಯ ವಂಚಿತ ಹಳ್ಯಾಳ ಗ್ರಾಮ

Last Updated 28 ನವೆಂಬರ್ 2017, 8:55 IST
ಅಕ್ಷರ ಗಾತ್ರ

ಅಫಜಲಪುರ: ತಾಲ್ಲೂಕಿನ ಬಳೂರ್ಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹಳ್ಯಾಳ ಗ್ರಾಮದಲ್ಲಿ ತಾಂಡಾ ಹರಿಜನ್‌ ವಾಡಾ ಸೇರಿ 2 ಸಾವಿರ ಜನಸಂಖ್ಯೆಯಿದ್ದು, 3 ಜನ ಗ್ರಾ.ಪಂ ಸದಸ್ಯರಿದ್ದಾರೆ. 1 – 5ರವರೆಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಿದೆ. ಆದರೆ, ಈ ಗ್ರಾಮ ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು, ಜನರು ಸೌಲಭ್ಯಗಳಿಗಾಗಿ ದಿನನಿತ್ಯ ಹರಸಾಹಸ ಪಡುವಂತಾಗಿದೆ.

ಹಳ್ಯಾಳ ಗ್ರಾಮಕ್ಕೆ ಸಂಚರಿಸಲು ಸೋಲಾಪುರ – ಅಫಜಲಪುರ ರಾಷ್ಟ್ರೀಯ ಹೆದ್ದಾರಿಯಿಂದ 2.5 ಕಿ.ಮೀ ಕೂಡುರಸ್ತೆಯಿಂದ ಗ್ರಾ.ಪಂ.ಗೆ ಹೋಗಬೇಕು. ಇಲ್ಲಿಂದ ಚಿಂಚೋಳಿ ಗ್ರಾಮಕ್ಕೆ ಹೋಗಲು ರಸ್ತೆಯಿಲ್ಲ. ಮಧ್ಯದಲ್ಲಿ ಸೇತುವೆಯೊಂದು ಕುಸಿದು ಬಿದ್ದಿರುವುದರಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ತಿಂಗಳಿಂದ ಗ್ರಾಮಕ್ಕೆ ಬಸ್ಸಿನ ವ್ಯವಸ್ಥೆ ಸ್ಥಗಿತವಾಗಿದೆ. ಗ್ರಾಮದಲ್ಲಿ ಕೇವಲ 1 – 5ವರೆಗೆ ಶಾಲೆಯಿದ್ದು, ಮುಂದಿನ ತರಗತಿಗೆ ವ್ಯಾಸಂಗ ಮಾಡಲು ಮಕ್ಕಳು ಚಿಂಚೋಳಿಗೆ ಮತ್ತು ಅಫಜಲಪುರಕ್ಕೆ ಹೋಗಲು ನಡೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

 ಗ್ರಾಮದಲ್ಲಿ ಚರಂಡಿ ವ್ಯವಸ್ಥೆಯಿಲ್ಲ. ಶುದ್ಧ ಕುಡಿಯುವ ನೀರಿನ ಘಟಕವಿಲ್ಲ. ವರ್ಷದ ಹಿಂದೆ ಗ್ರಾಮದಲ್ಲಿ ನಿರ್ಮಿಸಿರುವ ನೀರಿನ ಟ್ಯಾಂಕ್‌ ಉಪಯೋಗವಿಲ್ಲದೇ ಹಾಳಾಗುತ್ತಿದೆ’ ಎಂದು ಗ್ರಾಮದ ಶರಣಪ್ಪ ಶಿರೂರ, ಶಿವುಕುಮಾರ ಅತನೂರೆ ದೂರುತ್ತಾರೆ.

‘ಚುನಾವಣೆಯಲ್ಲಿ ಬರುತ್ತಾರೆ. ಗುಡ್ಡದಷ್ಟು ಭರವಸೆ ನೀಡುತ್ತಾರೆ. ಆಯ್ಕೆಯಾದ ಮೇಲೆ ಗ್ರಾಮಕ್ಕೆ ಯಾರೂ ಬರುವುದೇ ಇಲ್ಲ. ತಾಲ್ಲೂಕಿನಲ್ಲಿ ಹಿಂದುಳಿದ ಗ್ರಾಮವಾಗಿದೆ. ಗ್ರಾಮಸ್ಥರೇ ಹಣ ಸಂಗ್ರಹ ಮಾಡಿ ಕೂಡುರಸ್ತೆ ದುರಸ್ತಿ ಮಾಡಿಸಿದ್ದಾರೆ. ವರ್ಷದ ಹಿಂದೆ ಗ್ರಾಮದಲ್ಲಿ ₹30 ಲಕ್ಷ ಅನುದಾನದಲ್ಲಿ ಸಿ.ಸಿ. ರಸ್ತೆ ಮಂಜೂರಾಗಿತ್ತು. ಆದರೆ, ಅದನ್ನು ಜನಪ್ರತಿನಿಧಿಗಳು ರದ್ದುಪಡಿಸಿದ್ದಾರೆ. ಕಾರಣಗೊತ್ತಾಗಿಲ್ಲ. ಮಳೆಗಾಲದಲ್ಲಿ ಮನೆಯಿಂದ ಹೊರಗೆ ಕಾಲಿಡಲು ಸಾಧ್ಯವಾಗಲ್ಲ. ಅಷ್ಟು ರಸ್ತೆಗಳು ಹಾಳಾಗಿರುತ್ತವೆ. ಇದಕ್ಕೆಲ್ಲಾ ಜನಪ್ರತಿನಿಧಿಗಳ ನಿರ್ಲಕ್ಷವೇ ಕಾರಣ’ ಎಂದು ಅವರು ಹೇಳುತ್ತಾರೆ.

ಜಗದೇವಪ್ಪ ಹರಿಜನ್‌ ಮಾಹಿತಿ ನೀಡಿ, ‘ಗ್ರಾಮದಲ್ಲಿ ಯಾವುದೇ ಸೌಲಭ್ಯಗಳಿಲ್ಲ. ಗ್ರಾಮಕ್ಕೆ ಬಸ್‌ನ ವ್ಯವಸ್ಥೆಯಿಲ್ಲ. ಶಾಲೆಯಿದ್ದರೂ ಶಿಕ್ಷಕರು ಸರಿಯಾಗಿ ಶಾಲೆಗೆ ಬರುತ್ತಿಲ್ಲ. ಶಾಲೆಯ ಮುಂದೆ ಮರ ಮುರಿದು ಬಿದ್ದರೂ ಅದನ್ನು ತೆರವುಗೊಳಿಸುವ ಕೆಲಸ ಶಿಕ್ಷಕರು ಮಾಡುತ್ತಿಲ್ಲ’ ಎಂದು ವಿಷಾದಿಸುತ್ತಾರೆ.

ಆ ಭಾಗದ ಜಿ.ಪಂ ಸದಸ್ಯ ಅರುಣಕುಮಾರ ಎಂ.ಪಾಟೀಲ ಗ್ರಾಮದ ಮೂಲ ಸೌಲಭ್ಯಗಳ ಬಗ್ಗೆ ಕೇಳಿದಾಗ ‘ಮುಂದಿನ ದಿನಗಳಲ್ಲಿ ಗ್ರಾಮದ ಮುಖ್ಯ ರಸ್ತೆ ದುರಸ್ತಿ ಮಾಡಿಸಲಾಗುವುದು. ನೀರಿನ ಟ್ಯಾಂಕ್‌ಗೆ ನೀರು ಪೂರೈಕೆ ಮಾಡಲು ಪ್ರಯತ್ನ ಮಾಡುತ್ತೇನೆ. ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲಾಗುವುದು’ ಎಂದು ಹೇಳುತ್ತಾರೆ.

‘ನಮ್ಮಿಂದ ಆಯ್ಕೆಯಾದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಜನರ ಪರಿಸ್ಥಿತಿ ಅರಿತುಕೊಳ್ಳಬೇಕು. ಮೂಲ ಸೌಲಭ್ಯ ಒದಗಿಸಬೇಕು’ ಎಂದು ಗುರುಶಾಂತ ಹೇರೂರ ಹಾಗೂ ಗೋಪಾಲ್ ಧರ್ಮಣ್ಣ ಮಾಂಗ ಹೇಳುತ್ತಾರೆ.

* * 

ಚುನಾವಣೆ ಬಂದಾಗ ಎಲ್ಲರೂ ಬರುತ್ತಾರೆ. ಆಯ್ಕೆಯಾದ ಮೇಲೆ ಗ್ರಾಮಕ್ಕೆ ಬರುವುದೇ ಇಲ್ಲ. ಹೀಗಾಗಿ, ನಮ್ಮ ಗ್ರಾಮಕ್ಕೆ ಸರ್ಕಾರ ಯಾವುದೇ ಕಾರ್ಯಕ್ರಮ ನೀಡುತ್ತಿಲ್ಲ. ನಮ್ಮ ಗ್ರಾಮದ ಪರಿಸ್ಥಿತಿ ಸುಧಾರಣೆಯಾಗುತ್ತಿಲ್ಲ.
ಶಿವಶರಣಪ್ಪ ಹೇರೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT