ಯಾದಗಿರಿ: ಚರಂಡಿಗಳು ಸ್ವಚ್ಛಗೊಳ್ಳದ ಹಿನ್ನೆಲೆಯಲ್ಲಿ ಸೊಳ್ಳೆ ಕಾಟ ಹೆಚ್ಚಿದ್ದು, ಕ್ರಮ ಕೈಗೊಳ್ಳದ ನಗರಸಭೆಯ ವಿರುದ್ಧ ನಗರದ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಅಂಬೇಡ್ಕರ್ ನಗರದ, ಬಸವೇಶ್ವರ ನಗರ, ಚಿರಂಜೀವಿ ನಗರ, ಗಾಂಧಿ ನಗರ, ಚಕ್ರಕಟ್ಟಾ, ಲಕ್ಷ್ಮಿ ನಗರ, ಹಳೇ ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್, ಲುಂಬಿನಿ ವನದ ಸುತ್ತಮುತ್ತ, ಕೋಲಿವಾಡ, ಮದನಗಲ್ಲಿ, ಮುಸ್ಲಿಂಪುರ, ಗ್ರಾಮೀಣ ಪೊಲೀಸ್ ಠಾಣೆ ಸುತ್ತಲಿನ ಪ್ರದೇಶ, ಸರ್ಕಾರಿ ಕಾಲೇಜು, ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚರಂಡಿಗಳು ಸ್ವಚ್ಛಗೊಂಡಿಲ್ಲ. ಅಲ್ಲದೇ ಮಳೆಗಾಲದಲ್ಲಿ ತುಂಬಿರುವ ಗುಂಡಿಗಳಲ್ಲಿ ಸೊಳ್ಳೆ ಸಂತಾನ ಕೂಡ ಹೆಚ್ಚಿದ್ದು, ಯಾವ ವರ್ಷವೂ ಇಷ್ಟು ಪ್ರಮಾಣದಲ್ಲಿ ಸೊಳ್ಳೆಕಾಟ ಇರಲಿಲ್ಲ’ ಎಂದು ನಾಗರಿಕರಾದ ಹೇಮಂತ್, ದಿನಕರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.