ಬಾಗೇಪಲ್ಲಿ: ತಾಲ್ಲೂಕಿನ ರೈತರಿಗೆ ಈ ಬಾರಿ ತೊಗರಿ ಬೆಲೆ ಬಂಪರ್ ಫಸಲು ನೀಡುವ ನಿರೀಕ್ಷೆ ಇದೆ. ಒಟ್ಟು 910 ಹೆಕ್ಟೇರ್ನಲ್ಲಿ ರೈತರು ತೊಗರಿ ಬೆಳೆದಿದ್ದಾರೆ. ಎಲ್ಲೆಡೆ ಉತ್ತಮವಾಗಿ ಫಸಲು ಕಟ್ಟಿದೆ. ಬಹುತೇಕ ರೈತರು ಮಿಶ್ರಬೆಳೆಯಾಗಿ ತೊಗರಿ ಬೆಳೆದಿದ್ದಾರೆ.
‘ತೊಗರಿ ಗಿಡಗಳಲ್ಲಿ ಹೂ ಅರಳಿದ್ದು ಕೆಲವು ಕಡೆ ಕಾಯಿ ಕಚ್ಚುತ್ತಿದೆ. ನೀರಾವರಿ ಆಶ್ರಿತ ತೊಗರಿ ಬೆಳೆ ಮೊಗ್ಗು ಬಿಡುತ್ತಿದೆ’ ಎಂದು ರೈತ ನಾರಾಯಣಪ್ಪ ತಿಳಿಸಿದರು. ಸ್ವಲ್ಪ ಮಂಜು ಬೀಳುತ್ತಿದ್ದು ತಾಪಮಾನ ಕುಸಿತದಿಂದ ಹೂ ಉದುರುವ ಆತಂಕವನ್ನು ರೈತರು ವ್ಯಕ್ತಪಡಿಸುತ್ತಾರೆ.
ಕಸಬಾ, ಮಿಟ್ಟೇಮರಿ, ಪಾತಪಾಳ್ಯ, ಬಿಳ್ಳೂರು, ಚಾಕವೇಲು, ಜೂಲಪಾಳ್ಯ, ಗೂಳೂರು, ಸೋಮನಾಥಪುರ, ನಲ್ಲಗುಟ್ಲಪಲ್ಲಿ, ಜಂಗಾಲಹಳ್ಳಿ, ನಾರೇಮದ್ದೇಪಲ್ಲಿ, ತೋಳ್ಳಪಲ್ಲಿ, ಪೈಪಾಳ್ಯ, ಗುಜ್ಜೇಪಲ್ಲಿ ಭಾಗಗಳಲ್ಲಿ ತೊಗರಿ ಹೂ ಹೊತ್ತು ಮಿನುಗುತ್ತಿದೆ.
‘ಕೃಷಿ ಇಲಾಖೆ ತೊಗರಿಗೆ ಕೀಟನಾಶಕ ಮತ್ತು ಲಘು ಪೋಷಕಾಂಶಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ. ಮುಂಜಾಗೃತವಾಗಿ ರೈತರು 10 ಗ್ರಾಂ ಪಲ್ಸ್ ಮ್ಯಾಜಿಕ್ ಅನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು’ ಎಂದು ರೈತ ಮಂಜುನಾಥ್ ತಿಳಿಸಿದರು.
‘ತೊಗರಿ ಬೆಲೆ ಮಾರುಕಟ್ಟೆಯಲ್ಲಿ ಕಳೆದ ವರ್ಷದಿಂದ ಚೇತರಿಕೆ ಕಂಡಿಲ್ಲ. ತೊಗರಿಯನ್ನು ಬೆಂಬಲ ಬೆಲೆಯಡಿ ಸರ್ಕಾರ ಖರೀದಿಸಬೇಕು. ಕೇಂದ್ರ ಸರ್ಕಾರ ಬೆಂಬಲ ಬೆಲೆ ನೀಡಬೇಕು’ ಎಂದು ಪ್ರಾಂತ ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಜೆಸಿಬಿ ಮಂಜುನಾಥರೆಡ್ಡಿ ಒತ್ತಾಯಿಸಿದರು.