ನಾಯಕನಹಟ್ಟಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಯಾವುದಾದರೂ ಒಂದು ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತ ಎಂದು ನಟ ಶಶಿಕುಮಾರ್ ಹೇಳಿದರು.
ಪಟ್ಟಣದ ಗುರು ತಿಪ್ಪೇರುದ್ರಸ್ವಾಮಿ ಒಳಮಠ ಹಾಗೂ ಹೊರಮಠ ದೇವಾಲಯಕ್ಕೆ ಸೋಮವಾರ ಸಂಜೆ ಭೇಟಿ ನೀಡಿ ದೇವರ ದರ್ಶನ ಪಡೆದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.
‘ನಾನು ಸಂಸದನಾಗಿದ್ದಾಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ರೂಪುರೇಷೆಯನ್ನು ಸಿದ್ಧಪಡಿಸಲಾಗಿತ್ತು. ಜಿಲ್ಲೆಯ ಪ್ರತಿ ತಾಲ್ಲೂಕು ಕೇಂದ್ರದಲ್ಲಿ ಬಸ್ ನಿಲ್ದಾಣಗಳು, ಪ್ರತಿ ಹಳ್ಳಿಗೂ ಹೈಮಾಸ್ಟ್ ದೀಪಗಳು, ಕುಡಿಯುವ ನೀರಿನ ಟ್ಯಾಂಕರ್ಗಳು, ರಸ್ತೆ ಸೇರಿದಂತೆ ಹಲವು ಮೂಲಸೌಲಭ್ಯಗಳನ್ನು ಒದಗಿಸಲಾಗಿತ್ತು’ ಎಂದು ಹೇಳಿದರು.
‘ನಾಯಕನಹಟ್ಟಿ ದೇವಾಲಯಕ್ಕೆ ಹಲವು ಬಾರಿ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದೆ. ನಂತರ ಕಾರ್ಯ ಭಾರದ ಒತ್ತಡದಿಂದ ಬರಲಾಗಲಿಲ್ಲ. ಹೈದರಾಬಾದ್ನಲ್ಲಿ ನಡೆಯುತ್ತಿರುವ ‘ಕುರುಕ್ಷೇತ್ರ’ ಸಿನಿಮಾದ ಚಿತ್ರೀಕರಣದ ನಿಮಿತ್ತ ಇದೇ ಮಾರ್ಗವಾಗಿ ತೆರಳುತ್ತಿರುವುದರಿಂದ ದೇವರ ದರ್ಶನ ಪಡೆದಿದ್ದೇನೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ’ ಎಂದು ಅವರು ಸ್ಪಷ್ಟಪಡಿಸಿದರು.
‘ಈಗಾಗಲೇ ಸಾವಿರಾರು ಅಭಿಮಾನಿಗಳು, ಹಿರಿಯರು, ಹಿತೈಶಿಗಳು ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. ನನಗೆ ರಾಜಕೀಯದಲ್ಲಿ ಯಾರೂ ಶತ್ರುಗಳಿಲ್ಲ. ಜಿಲ್ಲೆಯ ಯಾವ ಕ್ಷೇತ್ರ ಮತ್ತು ಯಾವ ಪಕ್ಷದಿಂದ ಸ್ಪರ್ಧಿಸುತ್ತೇನೆ ಎಂದು ಜ.15ರಂದು ತಿಳಿಸುತ್ತೇನೆ’ ಎಂದು ಹೇಳಿದರು.
ಉದ್ಯಮಿ ಶ್ರೀನಿವಾಸ್, ಪ್ರಕಾಶ್, ಪಟ್ಟಣ ಪಂಚಾಯ್ತಿ ಸದಸ್ಯ ಟಿ.ಬಸಣ್ಣ, ಜಿ.ಬಿ.ಮುದಿಯಪ್ಪ, ಜೆ.ಪಿ.ತಿಪ್ಪೇಸ್ವಾಮಿ, ವ್ಯವಸ್ಥಾಪನ ಸಮಿತಿ ಸದಸ್ಯ ರುದ್ರಮುನಿ ಉಪಸ್ಥಿತರಿದ್ದರು.