ಮೊಳಕಾಲ್ಮುರು: ‘ಆನ್ಲೈನ್’ ಮೂಲಕ ವಸ್ತುಗಳ ಮಾರಾಟ ನೆಪದಲ್ಲಿ ನಕಲಿ ಸಾಮಗ್ರಿಗಳನ್ನು ಪೂರೈಕೆ ಮಾಡುತ್ತಾ ಗ್ರಾಹಕರನ್ನು ಮೋಸ ಮಾಡುತ್ತಿರುವ ಪ್ರಕರಣಗಳು ತಾಲ್ಲೂಕಿನಲ್ಲಿ ಹೆಚ್ಚಾಗುತ್ತಿವೆ.
ತಾಲ್ಲೂಕಿನ ಬಿ.ಜಿ.ಕೆರೆ ಸರ್ಕಾರಿ ಶಾಲೆಯೊಂದರ ಶಾಲಾಭಿವೃದ್ಧಿ ಸಮಿತಿ ಸದಸ್ಯರೊಬ್ಬರಿಗೆ ಸೋಮವಾರ ಆದ ವಂಚನೆ ಇದಕ್ಕೆ ಮತ್ತೊಂದು ಸೇರ್ಪಡೆ. ಕೆಲವು ದಿನಗಳ ಹಿಂದೆ ಅವರ ಮೊಬೈಲ್ಗೆ ಕರೆ ಮಾಡಿದ್ದ ವ್ಯಕ್ತಿಯು, ‘ನಿಮ್ಮ ನಂಬರ್ಗೆ ಲಾಟರಿ ಹೊಡೆದಿದೆ. ಹಣ ಪಾವತಿಸಿ ಮೊಬೈಲ್ ಹಾಗೂ ಉಡುಗೊರೆ ಪಡೆದುಕೊಳ್ಳಿ ಎಂದು ಹೇಳಿದ್ದ. ಅದನ್ನು ನಂಬಿದ ನಾನು ವಿಳಾಸ ನೀಡಿದ್ದೆ’ ಎಂದು ಹೇಳಿದರು.
‘ಕರೆ ಮಾಡಿದ್ದ ವ್ಯಕ್ತಿಯ ಹೇಳಿದಂತೆ ಸೋಮವಾರ ಅಂಚೆ ಮೂಲಕ ಅವರ ವಿಳಾಸಕ್ಕೆ ಪಾರ್ಸಲ್ ಬಂತು. ಅಂಚೆ ಕಚೇರಿಗೆ ₹ 1,850 ಪಾವತಿಸಿ ಪಾರ್ಸಲ್ ಪಡೆದುಕೊಂಡು ಅದನ್ನು ತೆರೆದೆ. ಆದರೆ, ಅದರಲ್ಲಿ ಬಂಗಾರದ ಲೇಪನ ಮಾಡಿದ್ದ ಲೋಹದ ಕೆಲವು ದೇವರ ವಿಗ್ರಹಗಳು ಹಾಗೂ ಪೂಜಾ ಸಾಮಗ್ರಿಯಿತ್ತು. ಮೊಬೈಲ್ ಇರಲಿಲ್ಲ. ಆತನಿಗೆ ಪುನಃ ಕರೆ ಮಾಡಿದರೆ ಸಂಪರ್ಕ ಸಾಧ್ಯವಾಗಲೇ ಇಲ್ಲ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.
ಈ ಬಗ್ಗೆ ಅಂಚೆ ಇಲಾಖೆ ತಾಲ್ಲೂಕು ಪ್ರಭಾರಿ ವ್ಯವಸ್ಥಾಪಕ ಸುರೇಶ್ ಮಾತನಾಡಿ, ‘ತಿಂಗಳಿಗೆ ಅಂದಾಜು 150 ಆನ್ಲೈನ್ ಪಾರ್ಸ್ಲ್ಗಳು ಬರುತ್ತವೆ. ಅವುಗಳಲ್ಲಿ ಶೇ 30–40ನ್ನು ಬಿಡಿಸಿಕೊಳ್ಳುವುದಿಲ್ಲ. ಕೆಲವು ಕಂಪೆನಿಗಳ ಬಗ್ಗೆ ದೂರುಗಳು ಬಂದಿಲ್ಲ. ಆದರೆ, ಕೆಲವು ಕಂಪೆನಿಗಳ ಹೆಸರು ಹೇಳಿಕಂಡು ಮೋಸ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಗ್ರಾಹಕರೇ ಎಚ್ಚರ ವಹಿಸಬೇಕು. ಇದರಲ್ಲಿ ಇಲಾಖೆಯ ಪಾತ್ರ ಏನೂ ಇಲ್ಲ’ ಎಂದು ಸ್ಪಷ್ಟಪಡಿಸಿದರು.
ಇದೇರೀತಿಯ ಪಾರ್ಸಲ್ ಇಲ್ಲಿನ ಗ್ರಾಮೀಣ ಬ್ಯಾಂಕ್ನ ಸಿಬ್ಬಂದಿಯೊಬ್ಬರಿಗೂ ಬಂದಿತ್ತು. ಅವರು ಸ್ವೀಕರಿಸಿರಲಿಲ್ಲ. ಕೆಲವರು ಹಣ ಪಾವತಿಸಿ ಪಾರ್ಸಲ್ ಪಡೆದು ಮೋಸ ಹೋಗಿದ್ದು ಗೊತ್ತಾದ ತಕ್ಷಣ ಅಂಚೆಕಚೇರಿಗೆ ಬಂದು ಗಲಾಟೆ ಮಾಡುತ್ತಾರೆ. ಇದರಿಂದ ತೀವ್ರ ಮುಜುಗರವಾಗುತ್ತದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಬೇಕು. ಜತೆಗೆ ಕಾನೂನು ಕ್ರಮಕ್ಕೂ ಸರ್ಕಾರ ಮುಂದಾಗಬೇಕು ಎಂದು ಅಂಚೆ ಇಲಾಖೆ ಸಿಬ್ಬಂದಿಯೊಬ್ಬರು ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.