ಕೋಲಾರ: ಅಂಬೇಡ್ಕರ್ 61ನೇ ಪರಿನಿಬ್ಬಾಣ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಭೀಮ ಜ್ಯೋತಿ ರಥಯಾತ್ರೆಗೆ ನಗರದಲ್ಲಿ ಬುಧವಾರ ಚಾಲನೆ ನೀಡಲಾಯಿತು.
ರಾಜ್ಯ ದಲಿತ ಸಂಘಟನೆಗಳ ಮಹಾ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿರುವ ರಥಯಾತ್ರೆಯು ನಚಿಕೇತನ ವಿದ್ಯಾರ್ಥಿನಿಲಯದಿಂದ ಆರಂಭವಾಯಿತು. ಡಿ.6ರವರೆಗೆ ಜಿಲ್ಲೆಯ ತಾಲ್ಲೂಕುಗಳು ಮತ್ತು ಹೋಬಳಿಗಳಲ್ಲಿ ಸಂಚರಿಸಲಿದೆ.
ವರ್ಣಭೇದ, ಜಾತಿಭೇದ, ಅಸ್ಪೃಶ್ಯತೆಯಂತಹ ಅನಿಷ್ಠ ಪದ್ಧತಿಗಳ ವಿರುದ್ಧ ಹಲವು ಮಹನೀಯರು ಹೋರಾಟ ಮಾಡಿದ್ದಾರೆ. ದಾರ್ಶನಿಕರು ಜನರ ಸರ್ವತ್ತೋಮುಕ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಆದರೂ ಅವರ ಪರಿಶ್ರಮ ಜನರಿಗೆ ಮನವರಿಕೆಯಾಗಿಲ್ಲ ಎಂದು ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ವಿ.ನಾರಾಯಣಸ್ವಾಮಿ ವಿಷಾದ ವ್ಯಕ್ತಪಡಿಸಿದರು.
ಕುದ್ಮಲ್ ರಂಗರಾವ್, ಬಿ.ಆರ್.ಅಂಬೇಡ್ಕರ್ರಂತಹ ಮಹನೀಯರು ಸ್ವಪ್ರೇರಣೆಯಿಂದ ಬದ್ಧತೆಯಿಂದ ದಲಿತರು ಮತ್ತು ಹಿಂದುಳಿದ ಜನಾಂಗಗಳ ಶ್ರೇಯಸ್ಸಿಗೆ ಶ್ರಮಿಸಿದರು. ಅಂಬೇಡ್ಕರ್ ತಮ್ಮ ಕ್ರಾಂತಿ ಜೀವನದಿಂದ ಮತ್ತು ಸಾಧನೆಯಿಂದ ಮಹಾ ಪುರುಷರಾಗಿದ್ದಾರೆ. ಅಂಬೇಡ್ಕರ್ 1956ರ ಡಿ.6ರಂದು ನಿಧನರಾದರು. ಪ್ರತಿ ವರ್ಷ ಆ ದಿನವನ್ನು ಪರಿನಿಬ್ಬಾಣ ದಿನವಾಗಿ ಆಚರಿಸಲಾಗುತ್ತಿದೆ ಎಂದು ವಿವರಿಸಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಲಕ್ಷ್ಮೀನಾರಾಯಣ್, ಒಕ್ಕೂಟದ ರಾಜ್ಯ ಘಟಕದ ಗೌರವಾಧ್ಯಕ್ಷ ಅಜಿತ್ಕುಮಾರ್, ಪ್ರಧಾನ ಕಾರ್ಯದರ್ಶಿ ಬಾಬು, ಉಪಾಧ್ಯಕ್ಷ ನಾರಾಯಣಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ್, ಸದಸ್ಯ ವೆಂಕಟೇಶ್ ಹಾಜರಿದ್ದರು.