ಮಂಡ್ಯ: ಮಾಸಾಶನ ಹೆಚ್ಚಳ, ಅಂಗವಿಕಲರ ಕಾಯ್ದೆ ಅನುಷ್ಠಾನ, ಉದ್ಯೋಗ ತರಬೇತಿ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಸದಸ್ಯರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕೇಂದ್ರ ನೀಡುತ್ತಿರುವ ಮಾಸಾಶನದಿಂದ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಶೇ 40ರಷ್ಟು ಅಂಗವೈಕಲ್ಯ ಹೊಂದಿದವರಿಗೆ ₹ 3 ಸಾವಿರ, ತೀವ್ರ ಸ್ವರೂಪದ ಅಂಗವೈಕಲ್ಯ ಇರುವವರಿಗೆ ₹ 5 ಸಾವಿರ ಜೀವನ ನಿರ್ಹಣಾ ಭತ್ಯ ನೀಡಬೇಕು.
ಅಂಗವಿಕಲರ ಕುಟುಂಬಕ್ಕೆ ಅಂತ್ಯೋದಯ ಕಾರ್ಡ್ ವಿತರಣೆ ಮಾಡಬೇಕು. 3 ತಿಂಗಳಿಗೊಮ್ಮೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಕುಂದುಕೊರತೆ ಸಭೆ ನಡೆಸಬೇಕು. ಅಂಗವಿಲರಿಗೆ ಸಲಕರಣೆ ವಿತರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಯಕ್ಷ ಕುಮಾರ್, ಪ್ರಧಾನ ಕಾರ್ಯದರ್ಶಿ ಗಿರಿಗೌಡ, ಸಿ.ಕುಮಾರಿ ಮರೀಗೌಡ, ಎಂ.ಎಸ್.ಕುಮಾರ್, ಕೆ.ಎಸ್.ನಂಜುಂಡೇಗೌಡ ಹಾಜರಿದ್ದರು.