‘ರಾಮಾಚಾರಿ’ ಚಿತ್ರದಲ್ಲಿ ‘ಕ್ರೇಜಿ ಸ್ಟಾರ್’ ರವಿಚಂದ್ರನ್ ಮತ್ತು ‘ಕನಸಿನ ರಾಣಿ’ ಮಾಲಾಶ್ರೀ ಜೋಡಿ ನೃತ್ಯಕ್ಕೆ ಹೆಜ್ಜೆ ಹಾಕಿ ಜನರಿಗೆ ಮೋಡಿ ಮಾಡಿತ್ತು. 25 ವರ್ಷದ ಬಳಿಕ ಈ ಜೋಡಿ ಉದಯ ಸಿಂಗರ್ ಜೂನಿಯರ್ಸ್ ಕಾರ್ಯಕ್ರಮದಲ್ಲಿ ಮತ್ತೆ ‘ಯಾರಿವಳು ಯಾರಿವಳು...’ ಹಾಡಿಗೆ ಹೆಜ್ಜೆ ಹಾಕಿದೆ.
‘ಈ ಹಾಡಿನ ಶೂಟಿಂಗ್ ನಡೆಯುತ್ತಿದ್ದಾಗ ಏನ್ ಆಗ್ತಿದೆ ಎಂದು ಗೊತ್ತಾಗುತ್ತಿರಲಿಲ್ಲ. ಪ್ರತಿ ದೃಶ್ಯವನ್ನು ಮತ್ತೆ ಮತ್ತೆ ಚಿತ್ರೀಕರಿಸಲಾಗುತ್ತಿತ್ತು. ಹಾಡು ಸಂಪೂರ್ಣವಾಗಿ ತೆರೆಯ ಮೇಲೆ ಬಂದಾಗಲೇ ರವಿಚಂದ್ರನ್ ಅನ್ನುವ ಅಗಾಧ ಶಕ್ತಿಯ ಅರಿವು ನನಗಾಯಿತು’ ಎಂದು ‘ರಾಮಾಚಾರಿ’ಯ ಹಳೆಯ ದಿನಗಳನ್ನು ನೆನಪಿಸಿಕೊಂಡರು ಮಾಲಾಶ್ರೀ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಲಾಶ್ರೀ ಅವರು ರವಿಚಂದ್ರನ್ ಜತೆಗಿನ ಅಂದಿನ ದಿನಗಳನ್ನು ಮೆಲುಕು ಹಾಕಿದರು.
‘ಒಂದು ಹಾಡಿಗಾಗಿ ರವಿಚಂದ್ರನ್ ಎಷ್ಟು ಶ್ರಮ ಹಾಕುತ್ತಾರೆ ಎನ್ನುವುದು ಅಂದು ನನಗೆ ಅರಿವಾಯಿತು. ಇದೇ ಅವರ ಯಶಸ್ಸಿನ ಗುಟ್ಟು. ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ’ ಎಂದು ಭಾವುಕರಾದರು.
ರವಿಚಂದ್ರನ್ ಕೂಡ ಮಾಲಾಶ್ರೀ ಅವರ ಬಗ್ಗೆ ಮಾತನಾಡಿ, ಕನ್ನಡ ಚಿತ್ರರಂಗಕ್ಕೆ ಅವರು ನೀಡಿರುವ ಕೊಡುಗೆಯನ್ನು ಶ್ಲಾಘಿಸಿದರು. ಮಾಲಾಶ್ರೀ ಮತ್ತು ರವಿಚಂದ್ರನ್ ವಿಶೇಷ ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಉದಯ ಟಿ.ವಿ.ಯಲ್ಲಿ ಪ್ರಸಾರವಾಗಲಿದೆ.