ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಇಂದಿರಾ ಕ್ಯಾಂಟೀನ್‌ನಲ್ಲಿ ನಿತ್ಯ 3,500 ಜನರಿಗೆ ಉಪಾಹಾರ, ಊಟ

Last Updated 30 ನವೆಂಬರ್ 2017, 11:28 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ವಿವಿಧೆಡೆ ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಲು ಜಿಲ್ಲಾಡಳಿತವು ಭರದಿಂದ ಸಿದ್ಧತೆ ನಡೆಸಿದೆ.

ರಾಜ್ಯ ಸರ್ಕಾರದ ಆದೇಶದಂತೆ ಬರುವ ಫೆಬ್ರುವರಿಯಲ್ಲಿ ಕ್ಯಾಂಟಿನ್‌ಗಳನ್ನು ಪ್ರಾರಂಭ ಮಾಡಬೇಕು. ಅಷ್ಟರೊಳಗೆ ಅಡುಗೆ ಕೋಣೆ, ಕ್ಯಾಂಟೀನ್‌ ಕಟ್ಟಡಗಳನ್ನು ಸಜ್ಜುಗೊಳಿಸುವ, ಅಡುಗೆ ಪಾತ್ರೆಗಳು, ಆಹಾರ ಸಾಮಗ್ರಿಗಳನ್ನು ಪೂರೈಸುವವರಿಗೆ ಗುತ್ತಿಗೆ ವಹಿಸುವ ಕೆಲಸ ಮುಗಿಸಬೇಕು.

ರಾಯಚೂರು ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಒಟ್ಟು ಏಳು ಇಂದಿರಾ ಕ್ಯಾಂಟೀನ್‌ಗಳನ್ನು ಸ್ಥಾಪಿಸಲು ಸಚಿವ ಸಂಪುಟವು ಅನುಮೋದನೆ ನೀಡಿದೆ. ಕ್ಯಾಂಟೀನ್‌ಗಳ ಸಂಖ್ಯೆ ಜಿಲ್ಲೆಯಿಂದ ಜಿಲ್ಲೆಗೆ ವ್ಯತ್ಯಾಸವಿದೆ.

ರಾಯಚೂರು ನಗರದಲ್ಲಿ ಮೂರು ಕ್ಯಾಂಟೀನ್‌ಗಳು ಹಾಗೂ ಒಂದು ಮಾಸ್ಟರ್‌ ಕಿಚನ್‌ ಸ್ಥಾಪಿಸಲಾಗುವುದು. ಪ್ರತಿ ತಾಲ್ಲೂಕು ಕೇಂದ್ರದಲ್ಲಿ ಅಡುಗೆ ಕೋಣೆ ಇರುವ ಒಂದು ಕ್ಯಾಂಟೀನ್‌ ಸ್ಥಾಪನೆಯಾಗಲಿದೆ.

ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ನೀಡಿರುವ ಸೂಚನೆಯಂತೆ ಕ್ಯಾಂಟಿನ್‌ಗಳನ್ನು ಅರಂಭಿಸಲು ಅಗತ್ಯ ನಿವೇಶನಗಳು ಹಾಗೂ ಮೂಲ ಸೌಕರ್ಯಗಳ ಲಭ್ಯತೆಯ ವಿವರವನ್ನು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಕಳುಹಿಸಿ ಕೊಟ್ಟಿದ್ದರು. ಕ್ಯಾಂಟೀನ್‌ ಸ್ಥಾಪಿಸುವ, ಜಾಗಗಳನ್ನು ಗುರುತಿಸಿ ಮತ್ತು ಅನುಮೋದನೆ ಪಡೆಯುವ ಪ್ರಕ್ರಿಯೆ ಅಕ್ಟೋಬರ್‌ನಲ್ಲೇ ಪೂರ್ಣಗೊಂಡಿದೆ.

ಕ್ಯಾಂಟೀನ್‌ ಆರಂಭಿಸಲು ಜಿಲ್ಲೆಯಲ್ಲಿ ಎಲ್ಲಿಯೂ ಸಿದ್ಧ ಕಟ್ಟಡಗಳಿಲ್ಲ. ಹೊಸ ಕಟ್ಟಡಗಳನ್ನು ನಿರ್ಮಿಸಲು ಸರ್ಕಾರಿ ನಿವೇಶನಗಳನ್ನು ಗುರುತಿಸಲಾಗಿದ್ದು, ಎಲ್ಲ ಕಡೆಗೂ ಕಟ್ಟಡಗಳ ನಿರ್ಮಾಣ ಪ್ರಗತಿಯಲ್ಲಿದೆ.

ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್‌) ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆರೋಪವಿದೆ. ಹೀಗಿದ್ದರೂ ಕಟ್ಟಡಗಳನ್ನು ನಿರ್ಮಿಸುವ ಹೊಣೆಗಾರಿಕೆ ಕೆಆರ್‌ಐಡಿಎಲ್‌ಗೆ ವಹಿಸಲಾಗಿದೆ.

ಕ್ಯಾಂಟೀನ್‌ ಕಟ್ಟಡ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕಿದೆ. ಹೀಗಾಗಿ ಕಟ್ಟಡ ನಿರ್ಮಾಣದ ಹೊಣೆಗಾರಿಕೆಯನ್ನು ಕೆಆರ್‌ಐಡಿಎಲ್‌ ಬದಲು ಬೇರೆ ಇಲಾಖೆಗೆ ವಹಿಸಬೇಕು ಎಂದು ಜಿಲ್ಲಾಡಳಿತವು ಪೌರಾಡಳಿತ ನಿರ್ದೇಶನಾಲಯಕ್ಕೆ ತಿಳಿಸಿದೆ.

ಎಲ್ಲರಿಗೂ ಇಲ್ಲ ಊಟ, ಉಪಾಹಾರ: ಇಂದಿರಾ ಕ್ಯಾಂಟೀನ್‌ನಲ್ಲಿ ಉಪಹಾರಕ್ಕೆ ₹5 ಮತ್ತು ಊಟಕ್ಕೆ ₹10 ಕೊಟ್ಟು ಕೂಪನ್‌ ಪಡೆಯಬೇಕು. ಸ್ವ–ಸಹಾಯ ಪದ್ಧತಿಯಲ್ಲಿ ಆಹಾರ ಪದಾರ್ಥ ಪಡೆದು ಸೇವಿಸಬೇಕು. ಉಪಾಹಾರ ಮತ್ತು ಊಟದಲ್ಲಿ ನಿತ್ಯವೂ ಬದಲಾವಣೆಗಳು ಇರುತ್ತವೆ.

ಊಟ, ಉಪಾಹಾರ ಬೇಕಿದ್ದವರು ಖುದ್ದಾಗಿ ಹಣ ಕೊಟ್ಟು ಆಹಾರ ಪಡೆಯಬೇಕು.

ಒಬ್ಬರೇ ಹತ್ತಾರು ಚೀಟಿ ಹಾಗೂ ಪಾರ್ಸಲ್‌ ತೆಗೆದುಕೊಂಡು ಹೋಗಲು ಅವಕಾಶ ಇರುವುದಿಲ್ಲ. ಕ್ಯಾಂಟಿನ್‌ನಲ್ಲಿ 500 ಜನರಿಗೆ ಮಾತ್ರ ಉಪಾಹಾರ, ಊಟದ ಕೂಪನ್‌ಗಳನ್ನು ಕೊಡಲಾಗುತ್ತದೆ. ಜಿಲ್ಲೆಯಲ್ಲಿ ಒಟ್ಟು 3,500 ಜನರು ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ಸೇವಿಸಲು ಸಾಧ್ಯವಾಗಲಿದೆ.

ಎಲ್ಲೆಲ್ಲಿ ಕ್ಯಾಂಟೀನ್ ನಿರ್ಮಾಣ
ನಗರದ ಕೆಎಸ್‌ಆರ್‌ಟಿಸಿ ಕೇಂದ್ರ ಬಸ್‌ ನಿಲ್ದಾಣದ ಎದುರು ಕೋಟೆ ಪಕ್ಕದಲ್ಲಿ, ರೈಲ್ವೆ ನಿಲ್ದಾಣ ವೃತ್ತದ ಹತ್ತಿರ ಪಿಡಬ್ಲ್ಯೂಡಿ ಜಾಗದಲ್ಲಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಇಂದಿರಾ ಕ್ಯಾಂಟೀನ್‌ಗಾಗಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ.

ಈ ಮೂರು ಕ್ಯಾಂಟೀನ್‌ಗಳಿಗೆ ಆಹಾರ ಪದಾರ್ಥಗಳನ್ನು ತಯಾರಿಸಿ ಸರಬರಾಜು ಮಾಡಲು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದ ಸಮೀಪದ ನವಚೇತನ ಶಾಲೆಯ ಪಕ್ಕದಲ್ಲಿ ಮಾಸ್ಟರ್‌ ಕಿಚನ್‌ ಕಟ್ಟಡ ನಿರ್ಮಾಣವಾಗುತ್ತಿದೆ.

ಸಿಂಧನೂರು ನಗರಸಭೆ ಕಚೇರಿಯ ಹಿಂಭಾಗ, ಮಾನ್ವಿ ಪಟ್ಟಣದ ಬಸವ ವೃತ್ತದಿಂದ ಬಸ್‌ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿರುವ ತೋಟಗಾರಿಕೆ ಇಲಾಖೆಯ ಆವರಣದಲ್ಲಿ, ದೇವದುರ್ಗ ಪಟ್ಟಣದ ಪುರಸಭೆ ಕಚೇರಿ ಹಿಂಭಾಗ ಹಾಗೂ ಲಿಂಗಸುಗೂರು ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್‌ ಡಿಪೋ ಮುಂದೆ ಮುದಗಲ್‌ ರಸ್ತೆಯಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಲಾಗುತ್ತದೆ.

*
ಸ್ಥಳೀಯರು ಸೇವಿಸುವ ಆಹಾರ ಪದಾರ್ಥ ಗಮನದಲ್ಲಿ ಇರಿಸಿಕೊಂಡು ಊಟ, ಉಪಾಹಾರದ ಮೆನುವಿನಲ್ಲಿ ಕೆಲ ಬದಲಾವಣೆ ಮಾಡಲಾಗುವುದು.
-ಈರಣ್ಣ ಜಿಲ್ಲಾ ನಗರಾಭಿವೃದ್ಧಿ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT