ಬನ್ನೂರು: ತಾಯಿಯಿಂದ ದೂರ ಇರುವ ಜನರಿಗೆ ತಾಯಿಯ ಮಹತ್ವ ತಿಳಿದಿರುವಂತೆ ತಾಯಿನಾಡಿನಿಂದ ದೂರ ಇರುವ ಜನರಿಗೂ ಅದರ ಮಹತ್ವ, ಪ್ರೀತಿ, ಅಭಿಮಾನ ತಿಳಿದಿರುತ್ತದೆ ಎಂದು ಜೆಡಿಎಸ್ ರಾಜ್ಯ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾಖಾನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಹೊಸಕೇರಿಯಲ್ಲಿನ ಸ್ನೇಹ ಜೀವಿ ಕನ್ನಡ ಯುವಕರ ಬಳಗದ ವತಿಯಿಂದ ಹಮ್ಮಿಕೊಳ್ಳಲಾದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ಭಾಷೆ ಅನ್ಯರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿದೆ ಎಂದ ಅವರು, ನಮ್ಮ ದೇಶವನ್ನು ಬಹುವರ್ಷಗಳ ಕಾಲ ಆಳಿದ ಬ್ರಿಟೀಷರಿಗೆ ಸೆಡ್ಡುಹೊಡೆಯುವ ಸಲುವಾಗಿಯೇ ಕನ್ನಡಿಗರು ಕೋಟು, ಕನ್ನಡಕ, ಟೈ ಧರಿಸುತ್ತಿದ್ದರು ಎಂದು ಹೇಳಿದರು.
ತಮ್ಮ ತಾಯಿ ನೆಲವನ್ನು, ಜನ್ಮಕೊಟ್ಟವರನ್ನು, ಮಾತೃಭಾಷೆಯನ್ನು ಹೆಚ್ಚಾಗಿ ಪ್ರೀತಿಸುವಂತೆ ಅವರು ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜೆಡಿಎಸ್ ಮುಖಂಡ ಎಸ್. ಶಂಕರ್ ಹಾಗೂ ಜಫ್ರುಲ್ಲಾಖಾನ್ ಅವರನ್ನು ಸನ್ಮಾನಿಸಲಾಯಿತು.