ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಂದಣಾಧಿಕಾರಿ ಕಚೇರಿಗಿಲ್ಲ ಸಿಸಿಟಿವಿ ಕಣ್ಗಾವಲು

Last Updated 1 ಡಿಸೆಂಬರ್ 2017, 5:03 IST
ಅಕ್ಷರ ಗಾತ್ರ

ರಾಮನಗರ: ನಿತ್ಯ ಹಣದ ವಹಿವಾಟು ನಡೆಯುವ ಇಲ್ಲಿನ ಉಪ ನೋಂದಣಾಧಿಕಾರಿ ಕಚೇರಿ ಒಳಗೆ ಹಾಗೂ ಹೊರಗೆ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ಇಲ್ಲ. ಇದರಿಂದ ಅಕ್ರಮಗಳಿಗೆಎಡೆಮಾಡಿಕೊಡುವಂತಹ ಸನ್ನಿವೇಶಗಳು ಸೃಷ್ಟಿ ಆಗುತ್ತಿದೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

ಕಳೆದ ವಾರ ಉಪ ನೋಂದಣಾಧಿಕಾರಿ ಕಚೇರಿಯ ಹೊರಗೆ ಕಾರಿನಲ್ಲಿದ್ದ ₹15 ಲಕ್ಷ ಹಣ ಕಳವು ಪ್ರಕರಣವು ಇಲ್ಲಿನ ಭದ್ರತಾ ಕ್ರಮಗಳನ್ನು ಪ್ರಶ್ನಿಸುವಂತೆ ಮಾಡಿದೆ. ಆಸ್ತಿಗಳ ಕೊಡು–ಕೊಳ್ಳುವಿಕೆಯ ನೋಂದಣಿ ಸಲುವಾಗಿ ನಿತ್ಯ ನೂರಾರು ಮಂದಿ ಈ ಕಚೇರಿಗೆ ಬಂದು ಹೋಗುತ್ತಾರೆ. ವಹಿವಾಟು ಉತ್ತಮವಾಗಿದೆ. ಹೀಗಿದ್ದೂ ಮುಂಜಾಗ್ರತೆಯಾಗಿ ಎಲ್ಲಿಯೂ ಸಿಸಿಟಿವಿ ಕ್ಯಾಮೆರಾ ಅಳವಡಿಸಿಕೊಳ್ಳಲು ಅಧಿಕಾರಿಗಳು ಮನಸ್ಸು ಮಾಡಿಲ್ಲ.

ರಾಮನಗರವು ಜಿಲ್ಲಾ ಕೇಂದ್ರವಾಗಿ ಘೋಷಣೆಯಾದ ಸಂದರ್ಭದಿಂದ ನೋಂದಣಾಧಿಕಾರಿ ಕಚೇರಿ ಕಾರ್ಯ ನಿರ್ವಹಿಸುತ್ತಿದೆ. ಸದ್ಯ ಹಳೆಯ ಕಟ್ಟಡದಲ್ಲಿಯೇ ತಕ್ಕಮಟ್ಟಿಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಒಳಗೆ ಬಂದು ಹೋಗುವವರಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಸಂಶಯಾಸ್ಪದ ವ್ಯಕ್ತಿಗಳ ಮೇಲೆ ನಿಗಾ ವಹಿಸುವ ಕಾರ್ಯ ಇನ್ನೂ ಆಗಿಲ್ಲ.

‘ನೋಂದಣಾಧಿಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಹಾಗೂ ದಲ್ಲಾಳಿಗಳ ಹಾವಳಿ ಸಾಮಾನ್ಯ ಎಂಬಂತೆ ಆಗಿದೆ. ಈಗ ಸಣ್ಣಪುಟ್ಟ ಅಂಗಡಿ–ಮಳಿಗೆಳಲ್ಲಿಯೂ ಸಿಸಿಟಿವಿ ಸಾಮಾನ್ಯ ಸಂಗತಿಯಾಗಿದೆ. ಆದರೆ ಇಷ್ಟು ದೊಡ್ಡ ಕಚೇರಿಯಲ್ಲಿ ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ಕ್ಯಾಮೆರಾ ಅಳವಡಿಸದೇ ಇರುವುದು ಸರಿಯಲ್ಲ’ ಎನ್ನುತ್ತಾರೆ ಗ್ರಾಹಕರಾದ ಮೋಹನ್‌.

‘ಕ್ಯಾಮೆರಾ ಅಳವಡಿಸಿದಲ್ಲಿ ಅಕ್ರಮಗಳಿಗೆ ತಡೆ ಒಡ್ಡುವುದು ಸಾಧ್ಯವಾಗಲಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿ ಪಾರದರ್ಶಕ ಆಡಳಿತ ಸಾಧ್ಯವಾಗಲಿದೆ. ಜೊತೆಗೆ ಹಣ ವಂಚನೆ, ಕಳವು ಮೊದಲಾದ ಪ್ರಕರಣಗಳ ಸಂದರ್ಭ ಕಳ್ಳರನ್ನೂ ಪತ್ತೆ ಮಾಡಲು ನೆರವಾಗಲಿದೆ. ಹೀಗಾಗಿ ಕಚೇರಿಯ ಒಳಗೆ–ಹೊರಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳಪಡಿಸಬೇಕು’ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ಈ ಕುರಿತು ಹಿರಿಯ ಉಪ ನೋಂದಣಾಧಿಕಾರಿ ನಾಗೇಂದ್ರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ ‘ಮೂಲ ಸೌಕರ್ಯ ಕಲ್ಪಿಸುವ ಕುರಿತು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗುತ್ತದೆ. ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಕುರಿತು ಸದ್ಯ ಯಾವುದೇ ಪ್ರಸ್ತಾವ ಬಂದಿಲ್ಲ’ ಎಂದು ತಿಳಿಸಿದರು. ‘ಸುರಕ್ಷತೆ ದೃಷ್ಟಿಯಿಂದ ಕ್ಯಾಮೆರಾ ಅಳವಡಿಸುವ ಅಗತ್ಯತೆ ಇದೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದು ತಿಳಿಸಿದರು.

* * 

ಕಚೇರಿಯಲ್ಲಿ ಸದ್ಯಕ್ಕೆ ಯಾವುದೇ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಲ್ಲ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು
ನಾಗೇಂದ್ರ
ಹಿರಿಯ ಉಪ ನೋಂದಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT